ಬೆಂಗಳೂರು: ದಲಿತ ಮುಖಂಡರೂ ಆದ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಅವರ ವಿರುದ್ಧ ಅನೇಕ ದೂರುಗಳಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ದಲಿತರಿಂದ ದಲಿತರ ಶೋಷಣೆ ವಿರೋಧಿ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ.
ಸಮಿತಿ ಸಂಚಾಲಕ ಡಿ.ವೀರಣ್ಣ, ಭಾರತೀಯ ಜನಸೇನಾ ಪಾರ್ಟಿ ಅಧ್ಯಕ್ಷ ಕೆ.ಎಸ್.ನೇತಾಜಿ ನಾಯ್ಡು, ಮುಸ್ಲಿಂ ಹೋರಾಟ ಸಮಿತಿ ಅಧ್ಯಕ್ಷ ಸಯ್ಯದ್ ಬಷೀರ್ ಅಹಮದ್, ಹಿಂದುಳಿದ ವರ್ಗಗಳ ಹೋರಾಟ ಸಮಿತಿ ಅಧ್ಯಕ್ಷ ರಂಗಪ್ಪ, ಎನ್ಜಿಇಎಫ್ ಮಾಜಿ ಅಧ್ಯಕ್ಷ ವಿ.ಶಂಕರ್ ಸೇರಿದಂತೆ ಇತರರು ಈ ಕುರಿತು ಗೃಹ ಸಚಿವ ಆರ್.ಅಶೋಕ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮುನಿಯಪ್ಪ ಅವರ ವಿರುದ್ಧ ಡಿ.ವೀರಣ್ಣ ಮತ್ತು ಅವರ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ ಆರೋಪ ಇದೆ. ಈ ಕುರಿತು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೇ ರೀತಿ ಇನ್ನೂ ಹಲವು ದೂರುಗಳಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.