ಬಂಗಾರಪೇಟೆ: ಒಂದು ಕಟ್ಟು ಸೊಪ್ಪಿಗೆ ರೂ. 30- 40 ಮಾರುಕಟ್ಟೆ ದರವಿದ್ದ ಕೊತ್ತಂಬರಿ ಸೊಪ್ಪಿನ ಬೆಲೆ ಒಮ್ಮೆಲೆ ರೂ. 3- 4 ಕ್ಕೆ ಇಳಿದ ಪರಿಣಾಮ ತಾಲ್ಲೂಕಿನ ಬಹಳಷ್ಟು ಕಡೆ ಕೊತ್ತಂಬರಿ ಬೆಳೆ ಒಣಗುತ್ತಾ ಹಾಳಾಗುತ್ತಿದೆ.
ಉತ್ತಮ ಇಳುವರಿ ಬಂದಿದೆ ಎಂದು ಹಿರಿಹಿರಿ ಹಿಗ್ಗಿದ ರೈತರಿಗೆ ಕುಸಿದ ಮಾರುಕಟ್ಟೆ ದರದಿಂದ ಕೊಳ್ಳುವವರೂ ಸಿಗದೇ ಹೊಲದಲ್ಲಿಯೇ ಒಣಗಲು ಬಿಟ್ಟಿದ್ದಾರೆ. ಇನ್ನು ಬಹಳಷ್ಟು ಜನ ತಮ್ಮ ಜಾನುವಾರುಗಳಿಗೆ ಕೊತ್ತಂಬರಿ ಬೆಳೆಯನ್ನು ಮೇವಾಗಿ ಬಳಸುತ್ತಿದ್ದಾರೆ.
ಒಂದು ತಿಂಗಳಿಗೆ ಕೈಗೆ ಬರುವ ಕೊತ್ತಂಬರಿ ಬೆಳೆ ಎಂದರೆ ತಾಲ್ಲೂಕಿನ ರೈತರಿಗೆ ಅಚ್ಚುಮೆಚ್ಚು. ಉತ್ತಮ ನೀರಾವರಿ, ಒಂದಿಷ್ಟು ಗೊಬ್ಬರ ಬಿದ್ದಲ್ಲಿ ಹುಲುಸಾಗಿ ಬೆಳೆದು ನಿಲ್ಲುವ ಕೊತ್ತಂಬರಿಯು ಸರ್ವಕಾಲಿಕ ಬೆಳೆಯಾದ ಕಾರಣ ಸದಾ ಕಾಣ ಸಿಗುತ್ತಿತ್ತು.
ಘಮ್ಮನೆ ಪರಿಮಳ ಸೂಸುವ ಕೊತ್ತಂಬರಿಯಿಲ್ಲದೇ ಅಡಿಗೆ ತಯಾರಿಯೂ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಕೊತ್ತಂಬರಿಗೆ ಸದಾ ಬೇಡಿಕೆ ಇರುತ್ತಿತ್ತು. ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿ ಬೆಲೆ ಈಗಷ್ಟೇ ಧರೆಗಿಳಿಯುತ್ತಿರುವ ಸಂದರ್ಭದಲ್ಲಿ ಕೊತ್ತಂಬರಿ ಬೆಲೆ ರೈತರಲ್ಲಿ ಆತಂಕ ಮೂಡಿಸಿದೆ. ಸಾವಿರಾರು ರೂ ವೆಚ್ಛ, ವಹಿಸಿದ ಪರಿಶ್ರಮ ಮಣ್ಣು ಪಾಲಾಗಿದೆ.