ಮುಂಬೈ (ಪಿಟಿಐ): ಡಾಲರ್ ವಿರುದ್ಧ ರೂಪಾಯಿ ಅಪಮೌಲ್ಯ ತಪ್ಪಿಸಲು ಮತ್ತು ಹೆಚ್ಚಿನ ವಿದೇಶಿ ವಿನಿಮಯ ಆಕರ್ಷಿಸಲು `ಆರ್ಬಿಐ'ನ ಹೊಸ ಗವರ್ನರ್ ರಘುರಾಂ ಜಿ. ರಾಜನ್ ದಿಟ್ಟ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ ಬೆನ್ನಲ್ಲೇ ಗುರುವಾರ ದೇಶದ ಹಣಕಾಸು ಮಾರುಕಟ್ಟೆ ಚೇತರಿಕೆ ಕಂಡಿದೆ.
ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಗುರುವಾರ 106 ಪೈಸೆಗಳಷ್ಟು (ಶೇ 1.58) ಏರಿಕೆ ಕಂಡಿದ್ದು ರೂ66.01ಕ್ಕೆ ಮರಳಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವೂ 412 ಅಂಶಗಳಷ್ಟು (ಶೇ2.22) ಚೇತರಿಕೆ ಕಂಡಿದ್ದು ಮೂರು ವಾರಗಳಲ್ಲೇ ಗರಿಷ್ಠ ಮಟ್ಟವಾದ 18,979 ಅಂಶಗಳಿಗೆ ತಲುಪಿದೆ.
`ರಾಜನ್ ಅವರ ಭರವಸೆಯ ಮಾತುಗಳಿಂದ ಹೂಡಿಕೆದಾರರಲ್ಲಿ ವಿಶ್ವಾಸ ಮರಳಿದೆ. ಇದರಿಂದ ಸೂಚ್ಯಂಕ ಕಳೆದ 2 ವಹಿವಾಟು ಅವಧಿಗಳಲ್ಲಿ 745ಅಂಶಗಳಷ್ಟು ಚೇತರಿಕೆ ಕಂಡಿದೆ' ಎಂದು `ಆರ್ಕೆಎಸ್ವಿ' ಸೆಕ್ಯುರಿಟೀಸ್ನ ರಘು ಕುಮಾರ್ ಹೇಳಿದ್ದಾರೆ.
ರೂ1,250 ಕುಸಿದ ಬಂಗಾರ
ನವದೆಹಲಿ (ಪಿಟಿಐ): ರೂಪಾಯಿ ಮತ್ತು ಷೇರುಪೇಟೆ ಚೇತರಿಕೆಯಿಂದ ಇಲ್ಲಿನ ಚಿನಿವಾರ ಪೇಟೆಯಲ್ಲಿ ಸ್ಟ್ಯಾಂಡರ್ಡ್ ಚಿನ್ನದ ಧಾರಣೆ ಗುರುವಾರ 10 ಗ್ರಾಂಗಳಿಗೆ ರೂ1,250 ಇಳಿಕೆ ಕಂಡಿದ್ದು ರೂ30,950ಕ್ಕೆ ಜಾರಿದೆ. ಬೆಳ್ಳಿ ಬೆಲೆ ಕೂಡ ಒಂದೇ ದಿನದಲ್ಲಿ ರೂ1,800 ರಷ್ಟು ಕುಸಿದು ರೂ53,700ರಷ್ಟಾಗಿದೆ. ಮುಂಬೈನಲ್ಲಿ ಚಿನ್ನ ರೂ380 ಮತ್ತು ಬೆಳ್ಳಿ ರೂ515 ಇಳಿಕೆ ಕಂಡಿದೆ.