ಮುಂಬೈ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಶುಕ್ರವಾರ ಪ್ರಕಟಿಸಿದ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅನಿರೀಕ್ಷಿತವಾಗಿ ಬಡ್ಡಿ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ದೇಶದ ಹಣಕಾಸು ಮಾರುಕಟ್ಟೆಯಲ್ಲಿ ದಿಢೀರ್ ಅಸ್ಥಿರತೆ ಕಾಣಿಸಿಕೊಂಡಿತು.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ವಹಿವಾಟಿನ ಒಂದು ಹಂತ ದಲ್ಲಿ 595 ಅಂಶ ಕುಸಿತ ಕಂಡಿತು. ನಂತರ ಗವರ್ನರ್ ರಘುರಾಂ ರಾಜನ್ ನೀಡಿದ ಸಕಾರಾತ್ಮಕ ಹೇಳಿಕೆಯಿಂದ 212 ಅಂಶಗಳಷ್ಟು ಚೇತರಿಕೆ ಕಂಡಿತು. ದಿನದಂತ್ಯದಲ್ಲಿ 383 ಅಂಶಗಳನ್ನು ಕಳೆದುಕೊಂಡ ಸೂಚ್ಯಂಕ 20,263 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.
ಷೇರುಪೇಟೆ ಕುಸಿತದಿಂದ ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯವೂ 46 ಪೈಸೆಗಳಷ್ಟು ಕುಸಿದು ರೂ.62.23ಕ್ಕೆ ಜಾರಿತು. ಆಮದುದಾರ ರಿಂದ ಡಾಲರ್ ಬೇಡಿಕೆ ಹೆಚ್ಚಿರುವುದು ಮತ್ತು ‘ಎಫ್ಐಐ’ ಹೂಡಿಕೆ ಮೇಲೆ ವಿಧಿಸಿರುವ ನಿರ್ಬಂಧ ಕೂಡ ರೂಪಾಯಿ ಅಪಮೌಲ್ಯಕ್ಕೆ ಕಾರಣವಾಗಿವೆ.
ಡಾಲರ್ ವಿರುದ್ಧ ರೂಪಾಯಿ ಅಪಮೌಲ್ಯ ತಪ್ಪಿಸಲು ಜುಲೈನಲ್ಲಿ ‘ಆರ್ಬಿಐ’ ಹಣಕಾಸು ಮಾರುಕಟ್ಟೆ ಮೇಲೆ ಕೆಲವು ನಿಯಂತ್ರಣ ಕ್ರಮಗಳನ್ನು ವಿಧಿಸಿತ್ತು. ಇದನ್ನು ಭಾಗಶಃ ವಾಪಸ್ ಪಡೆಯುವುದಾಗಿ ಗವರ್ನರ್ ಹೇಳಿ ದ್ದಾರೆ. ಇದರಿಂದ ಮಧ್ಯಾಹ್ನ ನಂತರದ ವಹಿವಾಟಿನಲ್ಲಿ ಸೂಚ್ಯಂಕ ಚೇತರಿಕೆ ಕಂಡಿತು. ಆದರೆ, ಇದಕ್ಕೂ ಮುನ್ನ ಬಡ್ಡಿ ದರ ಏರಿಕೆ ಭೀತಿಯಿಂದ ಬ್ಯಾಂಕ್, ವಾಹನ ಉದ್ಯಮ ವಲಯದ ಷೇರು ಗಳು ಗರಿಷ್ಠ ಮಟ್ಟದಲ್ಲಿ ಹಾನಿ ಅನುಭವಿಸಿದವು. ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಷೇರುಪೇಟೆ ವಹಿವಾಟು ರೂ.298 ಕೋಟಿಯಷ್ಟು ಇಳಿಕೆಯಾಗಿದೆ.
ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಕೂಡ ದಿನದ ವಹಿವಾಟಿನಲ್ಲಿ 103 ಅಂಶಗಳಷ್ಟು ಇಳಿಕೆ ಕಂಡು 6,012 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.