ಬೆಂಗಳೂರು: ಪ್ರತ್ಯೇಕ ರಾಜ್ಯ ನಿರ್ಮಾಣದ ವಿರುದ್ಧ ಧರ್ಮಾವರಂ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಕಡೆಗೆ ಹೊರಟಿದ್ದ ಹಲವು ರೈಲುಗಳ ಸಂಚಾರ ಗುರುವಾರವೂ ಅಸ್ತವ್ಯಸ್ತಗೊಂಡಿತು.
ಕುರ್ಲಾ-ಕೊಯಿಮತ್ತೂರು ಎಕ್ಸ್ಪ್ರೆಸ್ ಗುಂತಕಲ್ನಿಂದ ಮಾರ್ಗ ಬದಲಿಸಿ ಬಳ್ಳಾರಿ, ಚಿಕ್ಕಜಾಜೂರು, ಬೆಂಗಳೂರು ಮೂಲಕ ಕೊಯಮತ್ತೂರಿಗೆ ತೆರಳಿತು. ಯಶವಂತಪುರ- ಗೋರಖ್ಪುರ ಎಕ್ಸ್ಪ್ರೆಸ್ ಪೆನಕೊಂದಿಂದ ಮಾರ್ಗ ಬದಲಾಯಿಸಿ ತುಮಕೂರು, ಅರಸಿಕೆರೆ, ಚಿಕ್ಕಜಾಜೂರು ಮತ್ತು ಬಳ್ಳಾರಿ ಮಾರ್ಗವಾಗಿ ಸಂಚರಿಸಿತು.
ಬೆಳಿಗ್ಗೆ 8ಕ್ಕೆ ಹೊರಡಬೇಕಿದ್ದ ಯಶವಂತಪುರ-ವಿಜಯವಾಡಾ ಪ್ಯಾಸೆಂಜರ್ 10.30ಕ್ಕೆ ಹೊರಟಿತು. ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಮ್ವರೆಗೆ ಮಾತ್ರ ಸಂಚರಿಸಿ, ವಾಪಸು ಯಶವಂತಪುರಕ್ಕೆ ಆಗಮಿಸಿತು. ಮೈಸೂರು-ಜೈಪುರ ಎಕ್ಸ್ಪ್ರೆಸ್ ಬೆಂಗಳೂರಿನಿಂದ ಮಾರ್ಗ ಬದಲಾವಣೆ ಮಾಡಿ ತುಮಕೂರು, ಅರಸಿಕೆರೆ, ಚಿಕ್ಕಜಾಜೂರು, ಬಳ್ಳಾರಿ ಮತ್ತು ಗುಂತಕಲ್ ಮೂಲಕ ಪ್ರಯಾಣ ಬೆಳೆಸಿತು.
ಬೆಂಗಳೂರು-ಭುವನೇಶ್ವರ ಪ್ರಶಾಂತಿ ಎಕ್ಸ್ಪ್ರೆಸ್ ಸಹ ತನ್ನ ನಿತ್ಯದ ಮಾರ್ಗದ ಬದಲು ಕೃಷ್ಣರಾಜಪುರ, ಬಂಗಾರಪೇಟೆ, ಕಟಪಾಡಿ ಮತ್ತು ರೇಣಿಗುಂಟಾ ಮೂಲಕ ಸಂಚರಿಸಿತು. ಯಶವಂತಪುರ-ಕಾಚಿಗುಡ ಎಕ್ಸ್ಪ್ರೆಸ್ ಕೂಡ ತುಮಕೂರು, ಅರಸಿಕೆರೆ, ಬಳ್ಳಾರಿ ಮಾರ್ಗದ ಮೂಲಕ ಪ್ರಯಾಣ ಬೆಳೆಸಿತು.
ವಿಜಯವಾಡ-ಯಶವಂತಪುರ ಪ್ಯಾಸೆಂಜರ್ ಅನಂತಪುರದವರೆಗೆ ಮಾತ್ರ ಸಂಚರಿಸಿತು.
ಗುಂತಕಲ್-ಹಿಂದಪುರ, ಹಿಂದಪುರ-ಗುಂತಕಲ್, ಗುಂತಕಲ್-ತಿರುಪತಿ, ತಿರುಪತಿ-ಗುಂತಕಲ್ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿತ್ತು.
ಶುಕ್ರವಾರ ಸಹ ಗುಂತಕಲ್-ಹಿಂದಪುರ ಪ್ಯಾಸೆಂಜರ್ ಸಂಚಾರವನ್ನು ರದ್ದುಗೊಳಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ಉಳಿದ ರೈಲುಗಳ ಸಂಚಾರದ ಬಗೆಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.