ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗಸೂಚಿ ಉಲ್ಲಂಘನೆ:ಆರೋಪ

ವಾಜಪೇಯಿ ನಗರ ವಸತಿ ಯೋಜನೆ ಫಲಾನುಭವಿಗಳ ಆಯ್ಕೆ
Last Updated 1 ಜನವರಿ 2014, 9:46 IST
ಅಕ್ಷರ ಗಾತ್ರ

ಗಂಗಾವತಿ: ಇಲ್ಲಿನ ನಗರಸಭೆಗೆ ಪ್ರಸಕ್ತ 2013–14ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯ 125 ಫಲಾನುಭವಿಗಳ ಆಯ್ಕೆಯಲ್ಲಿ ಮಾರ್ಗ­ಸೂಚಿ ಉಲ್ಲಂಘನೆಯ ಆರೋಪ ಎದುರಿಸುತ್ತಿದ್ದು, ರದ್ದಾಗುವ ಆತಂಕ ಎದುರಾಗಿದೆ.

ನಗರಸಭೆಯ ಕೆಲ ಸದಸ್ಯರ ಹಸ್ತ­ಕ್ಷೇಪದಿಂದ ಮಾರ್ಗಸೂಚಿ ಉಂಲ್ಲಘಿಸ­ಲಾಗಿದೆ.  ಇದನ್ನು ಅನುಮೋದನೆಗಾಗಿ  ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ನಿಯಮ ಊಲ್ಲಂಘನೆಯನ್ನು ಗಮನಿ­ಸಿದ ಜಿಲ್ಲಾಧಿಕಾರಿ ಎರಡು ಬಾರಿ ಪಟ್ಟಿಯನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್‌ನ ಆಡಳಿತ ಮಂಡಳಿ ಸದಸ್ಯರು ತಯಾರಿಸಿದ ಫಲಾನುಭವಿಗಳ ಪಟ್ಟಿಗೆ ನಗರಸಭೆಯ ವಿರೋಧ ಪಕ್ಷದ ಕಾಂಗ್ರೆಸ್ಸಿನ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಗಮನಕ್ಕೂ ತಂದು ಪಟ್ಟಿಯನ್ನು ನೀಡಿದ್ದಾರೆ. 

ಮೀಸಲಾತಿ ಉಲ್ಲಂಘನೆ: ಉದ್ದೇಶಿತ ಯೋಜನೆಯಲ್ಲಿ ನಗರದಲ್ಲಿ ವಾಸಿಸು­ತ್ತಿರುವ ವಸತಿ ರಹಿತ ಕಡು ಬಡತನದ ಕುಟುಂಬಕ್ಕೆ ವಸತಿ ನಿಗಮದಿಂದ ಮನೆ ಕಟ್ಟಿಕೊಳ್ಳಲು ಸರ್ಕಾರ ₨1.30 ಲಕ್ಷ ಸಹಾಯಧನ  ನೀಡುತ್ತಿದ್ದು, ಮನೆ ನಿರ್ಮಾಣದ (ಯುನಿಟ್‌) ಮೊತ್ತ ಈ ಮೊದಲಿದ್ದ ₨1.80 ಲಕ್ಷದಿಂದ ಎರಡು ಲಕ್ಷಕ್ಕೆ ಹೆಚ್ಚಳ ಮಾಡಿದೆ.

ನಿಗಮದ ಮಾರ್ಗಸೂಚಿಯಂತೆ ಪರಿಶಿಷ್ಟ ಜಾತಿಗೆ ಶೇ 18, ಪಂಗಡಕ್ಕೆ ಶೇ 4.75, ಅಗವಿಕಲಕರಿಗೆ ಶೇ 5, ಮಾಜಿ ಸೈನಿಕ ಮತ್ತು ಸೈನಿಕರ ವಿಧವೆಯರಿಗೆ ಶೇ 1, ಹಿರಿಯ ನಾಗರಿಕರಿಗೆ ಶೇ 2 ಹಾಗೂ ವಿಚ್ಚೇದಿತ, ವಿಧುರರಿಗೆ ಶೇ 1ರಷ್ಟು ಮೀಸಲಾತಿ ಕಲ್ಪಿಸಬೇಕು.

ಆದರೆ ನಗರಸಭೆ ಅಂತಿಮಗೊ­ಳಿಸಿದ ಫಲಾನುಭವಿಗಳ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಬಿಟ್ಟರೆ ಬೇರೆ ಯಾವ ವರ್ಗಕ್ಕೂ ಮೀಸಲಾತಿ ಕಲ್ಪಿಸಿಲ್ಲದಿರು­ವುದು ‘ಪ್ರಜಾವಾಣಿ’ಗೆ ದೊರೆತ ಮಾಹಿತಿಯಲ್ಲಿ ಬಹಿರಂಗವಾಗಿದೆ.

ಒಂದೇ ವರ್ಗಕ್ಕೆ 71 ಮನೆ: 125 ಫಲಾನುಭವಿಗಳ ಪೈಕಿ ಅಲ್ಪ ಸಂಖ್ಯಾತ ವರ್ಗಗಳಿಗೆ ಪೈಕಿ ಆದ್ಯತೆ ನೀಡದೇ ಕೇವಲ ಒಂದೇ ಸಮುದಾಯಕ್ಕೆ ಸೇರಿದ 71 ಜನರನ್ನು ಆಯ್ಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಫಲಾನುಭವಿಗಳ ಪಟ್ಟಿಯಲ್ಲಿ ನಗರ­ಸಭೆಯ ಸದಸ್ಯರ ಪತ್ನಿಯರು, ಸದಸ್ಯೆ-­ಯರ ಪತಿಯಂದಿರು, ಸಂಬಂಧಿಕರು, ಚುನಾಯಿತ ಪ್ರತಿನಿಧಿಯೊಬ್ಬರ ವಾಹನ ಚಾಲಕನ ತಾಯಿ ಸೇರಿದಂತೆ ಆರ್ಥಿಕ ಸಬಲರನ್ನೆ ಸೇರಿಸಿ ಆಯ್ಕೆ ಮಾಡಲಾ­ಗಿದೆ ಎಂಬ ಆರೋಪವೂ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT