ಗಂಗಾವತಿ: ಇಲ್ಲಿನ ನಗರಸಭೆಗೆ ಪ್ರಸಕ್ತ 2013–14ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯ 125 ಫಲಾನುಭವಿಗಳ ಆಯ್ಕೆಯಲ್ಲಿ ಮಾರ್ಗಸೂಚಿ ಉಲ್ಲಂಘನೆಯ ಆರೋಪ ಎದುರಿಸುತ್ತಿದ್ದು, ರದ್ದಾಗುವ ಆತಂಕ ಎದುರಾಗಿದೆ.
ನಗರಸಭೆಯ ಕೆಲ ಸದಸ್ಯರ ಹಸ್ತಕ್ಷೇಪದಿಂದ ಮಾರ್ಗಸೂಚಿ ಉಂಲ್ಲಘಿಸಲಾಗಿದೆ. ಇದನ್ನು ಅನುಮೋದನೆಗಾಗಿ ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ನಿಯಮ ಊಲ್ಲಂಘನೆಯನ್ನು ಗಮನಿಸಿದ ಜಿಲ್ಲಾಧಿಕಾರಿ ಎರಡು ಬಾರಿ ಪಟ್ಟಿಯನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ನ ಆಡಳಿತ ಮಂಡಳಿ ಸದಸ್ಯರು ತಯಾರಿಸಿದ ಫಲಾನುಭವಿಗಳ ಪಟ್ಟಿಗೆ ನಗರಸಭೆಯ ವಿರೋಧ ಪಕ್ಷದ ಕಾಂಗ್ರೆಸ್ಸಿನ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಗಮನಕ್ಕೂ ತಂದು ಪಟ್ಟಿಯನ್ನು ನೀಡಿದ್ದಾರೆ.
ಮೀಸಲಾತಿ ಉಲ್ಲಂಘನೆ: ಉದ್ದೇಶಿತ ಯೋಜನೆಯಲ್ಲಿ ನಗರದಲ್ಲಿ ವಾಸಿಸುತ್ತಿರುವ ವಸತಿ ರಹಿತ ಕಡು ಬಡತನದ ಕುಟುಂಬಕ್ಕೆ ವಸತಿ ನಿಗಮದಿಂದ ಮನೆ ಕಟ್ಟಿಕೊಳ್ಳಲು ಸರ್ಕಾರ ₨1.30 ಲಕ್ಷ ಸಹಾಯಧನ ನೀಡುತ್ತಿದ್ದು, ಮನೆ ನಿರ್ಮಾಣದ (ಯುನಿಟ್) ಮೊತ್ತ ಈ ಮೊದಲಿದ್ದ ₨1.80 ಲಕ್ಷದಿಂದ ಎರಡು ಲಕ್ಷಕ್ಕೆ ಹೆಚ್ಚಳ ಮಾಡಿದೆ.
ನಿಗಮದ ಮಾರ್ಗಸೂಚಿಯಂತೆ ಪರಿಶಿಷ್ಟ ಜಾತಿಗೆ ಶೇ 18, ಪಂಗಡಕ್ಕೆ ಶೇ 4.75, ಅಗವಿಕಲಕರಿಗೆ ಶೇ 5, ಮಾಜಿ ಸೈನಿಕ ಮತ್ತು ಸೈನಿಕರ ವಿಧವೆಯರಿಗೆ ಶೇ 1, ಹಿರಿಯ ನಾಗರಿಕರಿಗೆ ಶೇ 2 ಹಾಗೂ ವಿಚ್ಚೇದಿತ, ವಿಧುರರಿಗೆ ಶೇ 1ರಷ್ಟು ಮೀಸಲಾತಿ ಕಲ್ಪಿಸಬೇಕು.
ಆದರೆ ನಗರಸಭೆ ಅಂತಿಮಗೊಳಿಸಿದ ಫಲಾನುಭವಿಗಳ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಬಿಟ್ಟರೆ ಬೇರೆ ಯಾವ ವರ್ಗಕ್ಕೂ ಮೀಸಲಾತಿ ಕಲ್ಪಿಸಿಲ್ಲದಿರುವುದು ‘ಪ್ರಜಾವಾಣಿ’ಗೆ ದೊರೆತ ಮಾಹಿತಿಯಲ್ಲಿ ಬಹಿರಂಗವಾಗಿದೆ.
ಒಂದೇ ವರ್ಗಕ್ಕೆ 71 ಮನೆ: 125 ಫಲಾನುಭವಿಗಳ ಪೈಕಿ ಅಲ್ಪ ಸಂಖ್ಯಾತ ವರ್ಗಗಳಿಗೆ ಪೈಕಿ ಆದ್ಯತೆ ನೀಡದೇ ಕೇವಲ ಒಂದೇ ಸಮುದಾಯಕ್ಕೆ ಸೇರಿದ 71 ಜನರನ್ನು ಆಯ್ಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಫಲಾನುಭವಿಗಳ ಪಟ್ಟಿಯಲ್ಲಿ ನಗರಸಭೆಯ ಸದಸ್ಯರ ಪತ್ನಿಯರು, ಸದಸ್ಯೆ-ಯರ ಪತಿಯಂದಿರು, ಸಂಬಂಧಿಕರು, ಚುನಾಯಿತ ಪ್ರತಿನಿಧಿಯೊಬ್ಬರ ವಾಹನ ಚಾಲಕನ ತಾಯಿ ಸೇರಿದಂತೆ ಆರ್ಥಿಕ ಸಬಲರನ್ನೆ ಸೇರಿಸಿ ಆಯ್ಕೆ ಮಾಡಲಾಗಿದೆ ಎಂಬ ಆರೋಪವೂ ವ್ಯಕ್ತವಾಗಿದೆ.