ಮಾಲೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಬುಧವಾರ ಮಾಲೂರು ಕ್ಷೇತ್ರದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ವೆಂಕಟೇಶಗೌಡ ನಾಮಪತ್ರ ಸಲ್ಲಿಸಲಿಲ್ಲ. ಪರಿಣಾಮವಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಇಲ್ಲದ ಸನ್ನಿವೇಶ ನಿರ್ಮಾಣವಾಗಿದೆ.
ಭೂ ಹಗರಣದಲ್ಲಿ ಸಿಲುಕಿರುವ ಇಲ್ಲಿನ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಅವರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಹೀಗಾಗಿ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ನಂತರ ಪಕ್ಷವು ವೆಂಕಟೇಶಗೌಡರಿಗೆ ಟಿಕೆಟ್ ಘೋಷಿಸಿತ್ತು.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ವೆಂಕಟೇಶಗೌಡ ನಾಮಪತ್ರ ಸಲ್ಲಿಸುವ ಅವಧಿ ಮುಗಿಯುವ 15 ನಿಮಿಷ ಮುನ್ನ, ಮಧ್ಯಾಹ್ನ 2.45ರ ಸುಮಾರಿಗೆ ಚುನಾವಣಾಧಿಕಾರಿ ಕೊಠಡಿಗೆ ಶಾಸಕ ಕೃಷ್ಣಯ್ಯಶೆಟ್ಟಿ ಜೊತೆ ತೆರಳಿದರು.
ನಾಮಪತ್ರ ಸಲ್ಲಿಸಿದ್ದಾರೆ ಎಂದೇ ಬಹುತೇಕರು ತಿಳಿದುಕೊಂಡಿದ್ದರು. ಆದರೆ ಅವರು ನಾಮಪತ್ರವನ್ನೇ ಸಲ್ಲಿಸದಿರುವುದು ಸಂಜೆ ವೇಳೆಗೆ ಚುನಾವಣಾಧಿಕಾರಿ ಮೂಲಕ ತಿಳಿದುಬಂತು. ಹೊಸ ಬೆಳವಣಿಗೆಯಲ್ಲಿ ಕೃಷ್ಣಯ್ಯಶೆಟ್ಟಿ ಪತ್ನಿ ಸುನೀತಾ ಶೆಟ್ಟಿ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.