ಮಾಲೂರು: ಪಟ್ಟಣದಲ್ಲಿ ಮಂಗಳವಾರ ಸಂಜೆ ಗುಡುಗು, ಬಿರುಗಾಳಿ ಸಹಿತ ಬಾರಿ ಮಳೆ ಸುರಿಯಿತು.
ಗಾಳಿ ಮಳೆಗೆ ನೀಲಗಿರಿ ಮರವೊಂದು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಹತ್ತಕ್ಕೂ ಹೆಚ್ಚು ಕಂಬಗಳು ಮುರಿದುಬಿದ್ದವು. ಒಂದು ಟ್ರಾನ್ಸ್ಫಾರ್ಮರ್ ನೆಲಕಚ್ಚಿತು. ಇದರಿಂದ ಪಟ್ಟಣದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತು.
ಬಿಸಿಲಿನ ಬೇಗೆಯಿಂದ ಬಳಲಿದ್ದ ಪಟ್ಟಣದ ಜನತೆಗೆ ಸಂಜೆ ಸುರಿದ ಮಳೆಯ ಸಿಂಚನ ತಂಪೆರೆಯಿತು ಎಂದುಕೊಳ್ಳುತ್ತಿರುವ ಹೊತ್ತಿನಲ್ಲೇ, ಹೊರವಲಯದಲ್ಲಿ ಸುರಿದ ಜೋರು ಮಳೆ ಅನಾಹುತವನ್ನೇ ಸೃಷ್ಟಿಸಿದ್ದು ಬಹಳ ಮಂದಿಗೆ ತಕ್ಷಣ ಗೊತ್ತಾಗಲಿಲ್ಲ.
ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿ ಬಿಸಿಲಿನ ತಾಪಮಾನದಿಂದ ಬೆವರಿಳಿಸಿದ್ದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಹಲವರು ಸ್ಥಳಕ್ಕೆ ಧಾವಿಸಿದರು. ಬೆಸ್ಕಾಂ ಇಲಾಖೆ ಸಹಾಯಕ ಎಂಜಿನಿಯರ್ ಪ್ರಶಾಂತ್ ಸಿಬ್ಬಂದಿಯೊಡನೆ ಸ್ಥಳಕ್ಕೆ ಧಾವಿಸಿ, ಒಂದೂವರೆ ಗಂಟೆ ಶ್ರಮಿಸಿ ಮರ, ಕಂಬಗಳನ್ನು ತೆರವುಗೊಳಿಸಿದರು.
ಮಳೆ ನೀರು ಹರಿಯಲು ದಾರಿ ಇಲ್ಲದೆ ಕೆಲವು ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೂ ತೊಂದರೆಯುಂಟಾಯಿತು. ಪಟ್ಟಣದ ಮಾರಿಕಾಂಬ ಮುಖ್ಯರಸ್ತೆಯಲ್ಲಿ ಮಳೆ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಯಲ್ಲಿ ನೀರು ನಿಂತು, ವಾಹನ ಸವಾರರು ಮತ್ತು ಪಾದಚಾರಿಗಳು ಹೆಚ್ಚು ತೊಂದರೆ ಅನುಭವಿಸಿದರು.