ಹೊಸಪೇಟೆ: ಯುವಕರು ಪ್ರೊ.ಸ.ಸ ಮಾಳವಾಡರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಪ್ರೊ.ಬಿ.ವಿ. ಗುಂಜೆಟ್ಟಿ ತಿಳಿಸಿದರು.ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರೊ.ಸ.ಸ. ಮಾಳವಾಡ ಮತ್ತು ಜೋಳದರಾಶಿ ದೊಡ್ಡನಗೌಡ ಶತಮಾನ ಸ್ಮರಣೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧಾರವಾಡದ ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕನ್ನಡ ಸಂಶೋಧನಾ ಸಂಸ್ಥೆಗಳ ಬೆಳವಣಿಗೆಯಲ್ಲಿ ಮಾಳವಾಡರ ಕೊಡುಗೆ ಅಪಾರ. ಅಂಥವರ ಬದುಕು, ಬರಹಗಳನ್ನು ಇಂದಿನ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು.ವಿಜಯನಗರ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಸ್. ಶಿವಾನಂದ ಮಾತನಾಡಿ, ಗಮಕ ಕಲೆಯನ್ನು ನಾಡಿನಾದ್ಯಂತ ಪ್ರಚಾರಪಡಿಸಿದ ಜೋಳದರಾಶಿ ದೊಡ್ಡನಗೌಡರ ಬದುಕು ವರ್ಣರಂಜಿತವಾದುದು.ರಂಗಭೂಮಿ ಕಲಾವಿದರಾಗಿ ಶ್ರೀಸಾಮಾನ್ಯನ ಬದುಕನ್ನು ತಮ್ಮ ನಾಟಕಗಳ ಮೂಲಕ ಪರಿಚಯಿಸುತ್ತಿದ್ದ ರೀತಿ ವಿಶಿಷ್ಟವಾಗಿತ್ತು ಎಂದು ತಿಳಿಸಿದರು.
ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರೊ.ಎಫ್.ಟಿ. ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಎ.ಮುರಿಗೆಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಭಾಗದ ಮುಖ್ಯಸ್ಥ ಡಾ.ಕೆ.ರವೀಂದ್ರನಾಥ, ಡಾ.ಎಸ್.ಎಸ್. ಅಂಗಡಿ, ಡಾ.ಎಸ್.ಆರ್. ಚೆನ್ನವೀರಪ್ಪ ಹಾಜರಿದ್ದರು.