ಲಿಂಗಸುಗೂರ: ತಾಲ್ಲೂಕಿನ ಗೋನವಾಟ್ಲತಾಂಡಾದ ಮುಗ್ಧ ಜನತೆಗೆ ಈ ಹಿಂದಿನಿಂದ ಸರ್ಕಾರಗಳು ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ಹಾಗೂ ಅಂಗವಿಕಲ ಮಾಸಾಶನ ಸೇರಿದಂತೆ ವಿವಿಧ ಯೋಜನೆಗಳಡಿ ನೀಡುತ್ತಿದ್ದ ಮಾಸಾಶನಗಳನ್ನು ಸ್ಥಗಿತಗೊಳಿಸಿ ತಾಲ್ಲೂಕು ಆಡಳಿತ ವಂಚಿಸಿದೆ.
ಕೂಡಲೆ ಈ ಮುಂಚೆ ನೀಡುತ್ತಿದ್ದ ಎಲ್ಲಾ ಮಾಶಾಸನಗಳನ್ನು ಪುನರ್ ಪರಿಶೀಲಿಸಿ ಮಂಜೂರ ಮಾಡುವಂತೆ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ಸಮಾಜ ಬಾಂಧವರು ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರು.
ಸೋಮವಾರ ತಹಸೀಲ್ದಾರ ರಾಮಣ್ಣ ಹೊಸಮನಿ ಅವರಿಗೆ ಮನವಿ ಅರ್ಪಿಸಿದ ಸಮಾಜ ಬಾಂಧವರು, ಬಂಜಾರರು ಕೂಲಿ ಮಾಡಿಕೊಂಡು ಕಟ್ಟಿಗೆ ಮಾರಿ ಬದುಕು ಕಟ್ಟಿಕೊಂಡಿದ್ದಾರೆ. ಕಡುಬಡತನದಲ್ಲಿ ಜೀವನ ನಡೆಸುತ್ತಿರುವ ಬಹುತೇಕ ಲಂಬಾಣಿಗ ಫಲಾನುಭವಿಗಳ ಮಾಸಾಶನ ತಡೆದು ಒಪ್ಪತ್ತಿನ ಊಟಕ್ಕೆ ಪರದಾಡುವಂತೆ ಮಾಡಲಾಗಿದೆ.
ಕಾನೂನಾತ್ಮಕ ಚೌಕಟ್ಟಿನಲ್ಲಿ ಪರಿಶೀಲನೆ ನಡೆಸಿ ನ್ಯಾಯ ಒದಗಿಸುವಂತೆ ಆಗ್ರಹಪಡಿಸಿದರು.
ಹುಲ್ಲಪ್ಪ ರಾಠೋಡ, ನೀಲೇಶ ಪವಾರ್, ಮಾನಪ್ಪ ಚವ್ಹಾಣ, ಲಕ್ಷ್ಮಣ, ಗೋಪಿಚಂದ, ಶಿವಾಜಿ, ಕುಬೇರ, ಶಿವಪ್ಪ, ರಾಮಚಂದ್ರ, ನೀಲಪ್ಪ, ಡಾಕಪ್ಪ, ಸಗರಪ್ಪ, ತಾರಾಸಿಂಗ್, ಜುಮ್ಮಾಬಾಯಿ, ಕೇಶುಬಾಯಿ, ಶಾಂತಾಬಾಯಿ, ಭೀಮಾಬಾಯಿ, ಕಮ್ಮಿಬಾಯಿ, ಪೀರಿಬಾಯಿ, ಸಗರಪ್ಪ ಮತ್ತಿತರರು ಪಾಲ್ಗೊಂಡಿದ್ದರು.