ಜನರನ್ನು ಸ್ವಾವಲಂಬಿಯಾಗಿ ಮಾಡುವ ಯೋಜನೆಗಳಿಗಿಂತ, ಸೋಮಾರಿಗಳನ್ನಾಗಿ ಮಾಡುವ ಯೋಜನೆಗಳು ರಾಜ್ಯದಲ್ಲಿ ಹೆಚ್ಚುತ್ತಿರುವುದು ವಿಷಾದನೀಯ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಶುರುವಿನಲ್ಲಿ ತಮ್ಮ ಕಾರ್ಯಶೈಲಿಯಿಂದ ಜನರನ್ನು ರೋಮಾಂಚನಗೊಳಿಸಿದರು. ಹಿಂದಿನ ಮುಖ್ಯಮಂತ್ರಿಗಳಂತೆ ಮಠ, ಮಂದಿರಗಳಿಗೆ ಎಡತಾಕದೆ ಸಾಹಿತಿ, ಚಿಂತಕರನ್ನು ಭೇಟಿಯಾದಾಗ ಅವರ ಬಗ್ಗೆ ಅಭಿಮಾನ ಮೂಡಿತ್ತು. ಆದರೆ ಕ್ರಮೇಣ ಅವರ ವರ್ಚಸ್ಸು ಮಾಸಲಾರಂಭಿಸಿದೆ.
ಶಾಲಾ ಮಕ್ಕಳಿಗೆ ಉಚಿತ ಪುಸ್ತಕ– ಸಮವಸ್ತ್ರ, ಬಿಸಿಯೂಟ ನೀಡಲಾಗುತ್ತಿದೆ. ಆದರೆ, ಎಷ್ಟೋ ಶಾಲೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಶಿಕ್ಷಕರಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಜನಸಾಮಾನ್ಯರ ಅಗತ್ಯಗಳಿಗೆ ಸ್ಪಂದಿಸಬೇಕಾದ ಇತರೆ ಹಲವು ಇಲಾಖೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಖಾಲಿ ಹುದ್ದೆ ತುಂಬುವ ಬಗ್ಗೆ ಸರ್ಕಾರ ಗಮನವನ್ನೇ ಹರಿಸಿಲ್ಲ. ಇದು ಯುವಜನತೆಯಲ್ಲಿ ನಿರಾಶೆ ಮೂಡಿಸಿದೆ.
ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಲ್ಲಿ ಮಾತ್ರ ಬಡವರಿದ್ದಾರೆ ಎಂದು ಭಾವಿಸಿ, ಯೋಜನೆಗಳನ್ನು ರೂಪಿಸುವುದು ಸರಿಯಲ್ಲ. ವಿರೋಧ ಪಕ್ಷದಲ್ಲಿದ್ದಾಗ ರೈತರ ಪರವಾಗಿ ತೋರಿದ ಕಾಳಜಿ ಈಗ ಕಾಣುತ್ತಿಲ್ಲ. ಇನ್ನಾದರೂ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಸೂಕ್ತ ಕಾರ್ಯಕ್ರಮ ರೂಪಿಸಲಿ.