ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಆಂದೋಲನಕ್ಕೆ ರಾಮನಗರ ಸಜ್ಜು

ಜನರಿಗೆ ಸರ್ಕಾರದ ಯೋಜನೆಗಳ ಮಾಹಿತಿ ರವಾನೆ *ಪ್ರಾತ್ಯಕ್ಷಿಕೆ ಮೂಲಕ ವಿವರಣೆ
Last Updated 7 ಡಿಸೆಂಬರ್ 2013, 9:56 IST
ಅಕ್ಷರ ಗಾತ್ರ

ರಾಮನಗರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗೆ ನೆರವು ಕಲ್ಪಿಸುವ ಉದ್ದೇಶದಿಂದ ಹಲವು ಜನ ಪರ ಯೋಜನೆಗಳು ಮತ್ತು ಕಾರ್ಯ ಕ್ರಮಗಳನ್ನು ನಿರಂತರವಾಗಿ ಜಾರಿಗೆ ತರುತ್ತಿವೆ. ಆದರೆ ಈ ಯೋಜನೆಗಳ ಮಾಹಿತಿಯ ಕೊರತೆಯಿಂದ ಜನ ಸಾಮಾನ್ಯರು ನಿರೀಕ್ಷಿತ ಮಟ್ಟದಲ್ಲಿ ಇವುಗಳನ್ನು ಬಳಸಿಕೊಳ್ಳುತ್ತಿಲ್ಲ.ಇದನ್ನು ಮನಗಂಡಿರುವ ಕೇಂದ್ರ ಸಮಾಚಾರ ಮತ್ತು ಪ್ರಚಾರ ಸಚಿವಾಲಯದ ವಾರ್ತಾ ಶಾಖೆಯು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಜನಸಾಮಾನ್ಯರ ಮನೆ ಬಾಗಿಲಿಗೆ ಯೋಜನೆಗಳ ಮಾಹಿತಿಯನ್ನು ಒದಗಿಸಲು ರಾಮನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನ ದಲ್ಲಿ ಇದೇ ಡಿ. 7 ರಿಂದ 9ರವರೆಗೆ ಭಾರತ ನಿರ್ಮಾಣ 'ಸಾರ್ವ ಜನಿಕ ಮಾಹಿತಿ ಆಂದೋಲನ'ವನ್ನು ಆಯೋಜಿಸಿದೆ.

ಸರ್ಕಾರದ ಪ್ರಮುಖ ಯೋಜನೆಗಳ ಸಮಗ್ರ ಮಾಹಿತಿಯನ್ನು ಫಲಾನು ಭವಿಗಳಿಗೆ ತಲುಪಿಸುವ ಉದ್ದೇಶವನ್ನು ಈ ಆಂದೋಲನ ಹೊಂದಿದೆ. ವಿಶೇಷ ವಾಗಿ ಕೇಂದ್ರ ಸರ್ಕಾರ ಜಾರಿ ಗೊಳಿಸಿರುವ ಪ್ರಮುಖ ಯೋಜನೆಗಳ ಬಗ್ಗೆ ನಾಗರಿಕರಿಗೆ ತಿಳಿಸಲಾಗುವುದು. ಎಲ್ಲಾ ಪ್ರಮುಖ ಇಲಾಖೆಗಳು ಆಂದೋಲನದಲ್ಲಿ ಭಾಗವಹಿಸಿ ತಮ್ಮ ಇಲಾಖೆಗಳ ಮಳಿಗೆಗಳನ್ನು ತೆರೆದು ಮಾಹಿತಿಯನ್ನು ಪ್ರಾತ್ಯಕ್ಷಿಕೆ ಹಾಗೂ ಯಶೋಗಾಥೆಗಳ ಮೂಲಕ ಒಂದೇ ಸೂರಿನಡಿ ಒದಗಿಸುವುದರಿಂದ ಜನ ಸಾಮಾನ್ಯರಿಗೂ ಅನುಕೂಲವಾಗಲಿದೆ.

ಏನೇನಿರಲಿದೆ ?
ಈ ಆಂದೋಲನದಲ್ಲಿ ಸುಮಾರು 40 ಮಳಿಗೆಗಳನ್ನು ತೆರೆಯಲಾಗು ವುದು. ವಸ್ತು ಪ್ರದರ್ಶನ ಮತ್ತು ಮಾಹಿತಿ ಹಾಗೂ ಮನರಂಜನೆ ನೀಡುವ ಕಾರ್ಯಕ್ರಮಗಳು ಇಲ್ಲಿ ಇರುತ್ತವೆ.  ವಿವಿಧ ಸಮುದಾಯದ ಗ್ರಾಮೀಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಭಾರತ್ ನಿರ್ಮಾಣ್, ಮಾಹಿತಿ ಹಕ್ಕು ಕಾಯಿದೆ, ಮಹಿಳಾ ಸುರಕ್ಷತಾ ಕಾನೂನು, ಸೌಲಭ್ಯಗಳ ನೇರ ವರ್ಗಾವಣೆ, ಭೂ ಸ್ವಾಧೀನ
ಮಸೂದೆ, ಆಹಾರ ಭದ್ರತಾ ಮಸೂದೆ, ಅಲ್ಪ ಸಂಖ್ಯಾತ ಅಭಿವೃದ್ಧಿ ಕುರಿತ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ, ಆಧಾರ್, ಕರ್ತವ್ಯ ನಿರತ ಮತ್ತು ನಿವೃತ್ತ ರಕ್ಷಣಾ ಸಿಬ್ಬಂದಿಗಳಿಗೆ ಇರುವ ಕಾರ್ಯಕ್ರಮ ಗಳು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಸರ್ವಶಿಕ್ಷ ಅಭಿಯಾನ, ರಿಯಲ್ ಎಸ್ಟೇಟ್ ಕಾಯಿದೆ, ರಾಷ್ಟ್ರೀಯ ಪಿಂಚಣಿ ಯೋಜನೆ, ಮಧ್ಯಾಹ್ನದ ಬಿಸಿಯೂಟದ ಕಾರ್ಯಕ್ರಮ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಸೇರಿದಂತೆ ಬಡವರು, ಹಿಂದುಳಿದವರು, ಪರಿಶಿಷ್ಟ ಜಾತಿ-ಪಂಗಡದವರು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರೂಪಿಸಿರುವ ಯೋಜ ನೆಗಳ ಮಾಹಿತಿ ಲಭ್ಯವಿರುತ್ತದೆ.

ಸ್ಥಳದಲ್ಲೇ ನೊಂದಾವಣಿ: ಮತದಾರರ ಪಟ್ಟಿ ಪರಿಷ್ಕರಣೆ, ಆಧಾರ್ ಗುರುತಿನ ಚೀಟಿ, ಪಡಿತರ ಚೀಟಿ ಇವುಗಳಿಗೂ ಪ್ರತ್ಯೇಕ ಮಳಿಗೆ ತೆರದಿರುವುದು ವಿಶೇಷ ವಾಗಿದೆ. ಮಾಹಿತಿ ಪಡೆಯುವುದರ ಜತೆಗೆ ಸ್ಥಳದಲ್ಲಿಯೇ ನೋಂದಾವಣಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಗ್ರಾಮಗಳಲ್ಲೂ ಜಾಗೃತಿ:  ಅಭಿಯಾನ ಕ್ಕೆ ಪೂರಕವಾಗಿ ಐದು ದಿನ ಜಾಗೃತಿ ಕಾರ್ಯಕ್ರಮವನ್ನು ತಾಲ್ಲೂಕಿನ 21 ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರ ಪ್ರಚಾರ ಶಾಖೆಯು ಚಲನಚಿತ್ರ ಪ್ರದರ್ಶನ, ಗುಂಪು ಸಭೆ, ಕಲಾತಂಡ ಗಳ ಮೂಲಕ ಗ್ರಾಮೀಣ ಜನರಿಗೆ ಮಾಹಿತಿ ಒದಗಿಸುತ್ತದೆ.

'2006ರಲ್ಲಿ ಪ್ರಾರಂಭಿಸಲಾದ ಈ ಆಂದೋಲನವನ್ನು ರಾಜ್ಯದಲ್ಲಿ ಇದುವರೆಗೆ 30 ಕಡೆ ಆಯೋಜಿಸ ಲಾಗಿದೆ. ಆಂದೋಲನದಲ್ಲಿ ವ್ಯಕ್ತ ವಾಗುವ ಸಾರ್ವಜನಿಕ ಅಭಿಪ್ರಾಯ, ಕುಂದು ಕೊರತೆ, ದೂರುಗಳ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಯೋಜನೆಗಳ ನ್ಯೂನತೆಗಳನ್ನು ಸರಿಪಡಿಸುವ ಕೆಲಸದಲ್ಲಿ ನೆರವಾಗುವ ಕಾರ್ಯವನ್ನು ಮಾಡಲಾಗುವುದು' ಎಂದು ಭಾರತ ಸರ್ಕಾರದ ವಾರ್ತೆ ಮತ್ತು ಪ್ರಚಾರ ಇಲಾಖೆಯ ಪಿಐಬಿ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಎಸ್. ವೆಂಕಟೇಶ್ವರ್ ತಿಳಿಸಿದರು.

ಮನೆ ಬಾಗಿಲಿಗೆ ಮಾಹಿತಿ: ‘ಮಾಹಿತಿ ಕೊರತೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಕಷ್ಟು ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಮೂರು ದಿನದ ಸಾರ್ವಜನಿಕ ಮಾಹಿತಿ ಆಂದೋಲನವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡರೆ ಆಂದೋಲನವು ಸಾರ್ಥಕವಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ 'ಪ್ರಜಾವಾಣಿ'ಗೆ ತಿಳಿಸಿದರು.

ಇಂದು ಉದ್ಘಾಟನೆ: ಡಿ.7ರಂದು ಅಭಿಯಾನ ಜಾಗೃತಿ ಜಾಥಾವನ್ನು ಮಿನಿ ವಿಧಾನಸೌಧದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಹಮ್ಮಿಕೊಳ್ಳ ಲಾಗಿದೆ. ಜಾಥಾದಲ್ಲಿ ಅಧಿಕಾರಿಗಳು ಸೇರಿದಂತೆ ಸುಮಾರು 700 ವಿದ್ಯಾರ್ಥಿಗಳು ಭಾಗವಹಿಸುವರು. ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾಜರ್ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿ ದ್ದಾರೆ. ಸಂಸದ ಡಿ.ಕೆ. ಸುರೇಶ್ ಮಳಿಗೆಗಳನ್ನು ಉದ್ಘಾಟಿಸುವರು.


ಮೂರು ದಿನಗಳ ಕಾರ್ಯಕ್ರಮದ ಮಾಹಿತಿ
ಡಿ. 7 ರ ಶನಿವಾರ ಸಂಜೆ 4 ಗಂಟೆಗೆ, ಲಘು ನಾಟಕಗಳು, ಸರ್ವಶಿಕ್ಷಣ ಅಭಿಯಾನ, ಸಾಮಾಜಿಕ ಅರಣ್ಯ, ಐ.ಸಿ.ಡಿ.ಎಸ್., ಮಹಿಳಾ ಸಬಲೀಕರಣ. ಕೇಂದ್ರ ಸರ್ಕಾರದ ಚಲನಚಿತ್ರ ವಿಭಾಗದಿಂದ ಚಲನಚಿತ್ರ ಪ್ರದರ್ಶನ, ಸಂಗೀತ ಮತ್ತು ನಾಟಕ ವಿಭಾಗದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ರಸಸಂಜೆ.

ಡಿ.8ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಕೃಷಿ, ತೋಟಗಾರಿಕೆ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ, ನಿರ್ಮಲ ಭಾರತ ಅಭಿಯಾನ. ಕ್ಷೀರಭಾಗ್ಯ, ಜಲಾನಯನ, ವಿದ್ಯುತ್, ಗ್ರಾಮೀಣ ದೂರ ವಾಣಿ, ಮಧ್ಯಾಹ್ನದ ಬಿಸಿ ಯೂಟ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳ ಬಗ್ಗೆ ಕಾರ್ಯಾಗಾರಗಳು ನಡೆಯಲಿವೆ.

ಸಂಜೆ 4 ಗಂಟೆಗೆ ಲಘು ನಾಟಕಗಳು, ಕೇಂದ್ರ ಸರ್ಕಾರದ ಚಲನಚಿತ್ರ ವಿಭಾಗ ದಿಂದ ಚಲನಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಸಾಂಸ್ಕೃತಿಕ ರಸಸಂಜೆ.

ಡಿ.9ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ಭೂಸ್ವಾಧೀನ ಕಾಯಿದೆ, ಸಕಾಲ ಆಹಾರ ಭದ್ರತಾ ಕಾಯಿದೆ, ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ, ಆಧಾರ್ ಸಾಮಾ ಜಿಕ ಭದ್ರತೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಬಗ್ಗೆ ಕಾರ್ಯಾ ಗಾರಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT