ವಿಜಾಪುರ: ಎಲ್ಪಿಜಿ ಸಿಲಿಂಡರ್ ಸಂಪರ್ಕ ಪಡೆದಿರುವ ಗ್ರಾಹಕರು ತಮ್ಮ ಮನೆಯ ವಿದ್ಯುತ್ ಸಂಪರ್ಕದ ಆರ್.ಆರ್. ಸಂಖ್ಯೆ ಹಾಗೂ ಪಡಿತರ ಚೀಟಿಯ ಪ್ರತಿಯನ್ನು ವಿತರಕರಿಗೆ ನೀಡಬೇಕು. ಇಲ್ಲದಿದ್ದರೆ ಸಿಲಿಂಡರ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕಿ ಗಂಗೂಬಾಯಿ ಮಾನಕರ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿರುವ ಎಲ್ಪಿಜಿ ಗ್ರಾಹಕರಿಂದ ಅವರು ವಾಸವಿರುವ ಮನೆಗೆ ವಿದ್ಯುತ್ ಸಂಪರ್ಕ ಪಡೆದಿರುವ ಆರ್.ಆರ್. ಸಂಖ್ಯೆ ಹಾಗೂ ಪಡಿತರ ಚೀಟಿಯ ವಿವರಗಳನ್ನು ಸಂಗ್ರಹಿಸಿ ಮಾಹಿತಿ ಒದಗಿಸಲು ಆಯಾ ಎಲ್ಪಿಜಿ ಡೀಲರ್ಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಜಾಪುರ ನಗರ ಹಾಗೂ ಜಿಲ್ಲೆಯ ಪಟ್ಟಣ ಪ್ರದೇಶದ ಎಲ್ಪಿಜಿ ಗ್ರಾಹಕರು ತಾವು ವಾಸವಿರುವ ಮನೆಯ ವಿದ್ಯುತ್ ಸಂಪರ್ಕದ ಆರ್.ಆರ್. ಸಂಖ್ಯೆ ಇರುವ ವಿದ್ಯುತ್ ಬಿಲ್ಲನ್ನು ಮತ್ತು ಹೊಂದಿರುವ ಪಡಿತರ ಚೀಟಿಯ ಝರಾಕ್ಸ್ ಪ್ರತಿಯನ್ನು ಕೂಡಲೇ ಸಂಬಂಧಿಸಿದ ಎಲ್ಪಿಜಿ ಡೀಲರ್ಗಳಿಗೆ ನೀಡಬೇಕು ಎಂದು ಹೇಳಿದ್ದಾರೆ.
ಆರ್.ಆರ್. ಸಂಖ್ಯೆ ಇರುವ ಪಾವತಿ ಮತ್ತು ಪಡಿತರ ಚೀಟಿಯ ಝರಾಕ್ಸ್ ಪ್ರತಿಯನ್ನು ನೀಡದಿರುವ ಎಲ್ಪಿಜಿ ಗ್ರಾಹಕರಿಗೆ ಮುಂಬರುವ ದಿನಗಳಲ್ಲಿ ಸಿಲಿಂಡರ್ಗಳನ್ನು ಪೂರೈಕೆ ಮಾಡಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮತದಾರರ ಪಟ್ಟಿ ಪ್ರಕಟ
ಪರಿಷ್ಕತ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಹೆಸರು ಸೇರ್ಪಡೆ, ಕೈಬಿಟ್ಟು ಹೋಗಿರುವ ಹೆಸರು ಸೇರ್ಪಡೆ, ತಿದ್ದುಪಡಿ, ಮತಗಟ್ಟೆ ಬದಲಾವಣೆ ಕುರಿತಂತೆ ಚುನಾವಣೆ ಆಯೋಗದ ನಿಯಮದಂತೆ ನಿಗದಿತ ಅರ್ಜಿಗಳನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ನೀಡುವಂತೆ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಕೋರಿದ್ದಾರೆ.