ಧಾರವಾಡ: ‘ಮಾಹಿತಿ ಹಕ್ಕಿನ ಜಾರಿಯಿಂದಾಗಿ ಸರ್ಕಾರಿ ಕೆಲಸ ಕಾರ್ಯದಲ್ಲಿ ಹೆಚ್ಚು ಪಾರದರ್ಶಕತೆ ಹಾಗೂ ಉತ್ತರದಾಯಿತ್ವದ ಬದ್ಧತೆ ಬೆಳೆಯುತ್ತಿದೆ. ಇದರಿಂದ ದೇಶದ ಒಟ್ಟಾರೆ ಅಭಿವೃದ್ಧಿಯಲ್ಲಿ ಧನಾತ್ಮಕ ಬೆಳವಣಿಗೆ ಆಗಿದೆ’ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಸಿ.ಎಂ.ಶಿರೋಳ ಹೇಳಿದರು.
ಇಲ್ಲಿನ ಎಸ್ಡಿಎಂ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ವಾರ್ತಾ ಇಲಾಖೆಯ ಹುಬ್ಬಳ್ಳಿ ಸಮಾಚಾರ ಕೇಂದ್ರ ಹಾಗೂ ಜೆಎಸ್ಎಸ್ ಸಕ್ರಿ ಕಾನೂನು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ವಿಭಾಗದ 7 ಜಿಲ್ಲೆಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಏರ್ಪಡಿಸಿದ್ದ ಮಾಹಿತಿ ಹಕ್ಕು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಧಿಕಾರದ ದುರುಪಯೋಗ ತಡೆಯಲು ಮಾಹಿತಿ ಹಕ್ಕು ಜನರಲ್ಲಿ ಇರುವ ಪ್ರಬಲ ಅಸ್ತ್ರ ಎಂದು ಕಾನೂನು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಕೆ.ಎಸ್.ಬಗಾಲೆ ಹೇಳಿದರು. ‘ನಮ್ಮ ಕೆಲಸ ಕಾರ್ಯಗಳನ್ನು ಪಾರದರ್ಶಕವಾಗಿ, ನಿಯಮಬದ್ಧವಾಗಿ ಮಾಡಿದಾಗ ಆ ಮಾಹಿತಿ ನೀಡುವಿಕೆ ಸುಲಭವಾಗುತ್ತದೆ’ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ಹೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಶಿಖಾ ಅಧ್ಯಕ್ಷತೆ ವಹಿಸಿದ್ದರು. ಡಾ. ಜೆ.ವಿ.ಚೌಟೆ ವೇದಿಕೆಯಲ್ಲಿದ್ದರು.