ಮೈಸೂರು: ಬಹಳ ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ ಬೆಳಕಿಗೆ ಬಂದ ಕ್ರಿಕೆಟ್ ಪ್ರತಿಭೆ ಪರ್ವೇಜ್ ರಸೂಲ್, ಈಗ ಭಾರತ ಕ್ರಿಕೆಟ್ ತಂಡದ ಕದ ತಟ್ಟುತ್ತಿರುವ ಆಟಗಾರ.
ತಮ್ಮ ಸ್ಪಿನ್ ಪ್ರತಿಭೆಯಿಂದ ಆಯ್ಕೆದಾರರ ಗಮನ ಸೆಳೆದು, ಲೀಸ್ಟ್ ‘ಎ‘ ತಂಡದಲ್ಲಿ ಆಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅದನ್ನು ಸಮರ್ಥಿಸಿಕೊಳ್ಳುವಂತೆ ಗಂಗೋತ್ರಿ ಗ್ಲೇಡ್ಸ್ ನಲ್ಲಿ ನಡೆಯುತ್ತಿರುವ ಲೀಸ್ಟ್ ‘ಎ‘ ಟೆಸ್ಟ್ ನಲ್ಲಿ ವೆಸ್ಟ್ ಇಂಡೀಸ್ ತಂಡದ 5 ವಿಕೆಟ್ ಗಳನ್ನು ಪಡೆದು ಮಿಂಚಿದ್ದಾರೆ.
ಬುಧವಾರ ಎರಡು ವಿಕೆಟ್ ಗಳಿಸುವ ಮೂಲಕ ಭಾರತ ‘ಎ‘ ತಂಡದ ಹೋರಾಟಕ್ಕೆ ಮರುಜೀವ ತುಂಬಿದ್ದ ಅವರು, ಎರಡನೇ ದಿನ ವಿಂಡೀಸ್ ಬ್ಯಾಟ್ಸ್ ಮನ್ ಗಳು ರನ್ ಗಳಿಸುತ್ತಿದ್ದರೂ, ಒತ್ತಡಕ್ಕೆ ಒಳಗಾಗದ ರಸೂಲ್, ತದೇಕಚಿತ್ತದಿಂದ ಬೌಲಿಂಗ್ ಮಾಡುತ್ತಲೇ ಇದ್ದರು. ಇನಿಂಗ್ಸ್ ನಲ್ಲಿ ಬೌಲಿಂಗ್ ಮಾಡಿದ ಆರು ಬೌಲರ್ ಗಳ ಪೈಕಿ ಅತಿ ಹೆಚ್ಚು ಓವರ್ ಬೌಲ್ (45–13–116–5) ಮಾಡಿದವರು ರಸೂಲ್. ಬುಧವಾರ ತಮ್ಮದೇ ಬೌಲಿಂಗ್ ನಲ್ಲಿ ನರಸಿಂಗ್ ದಿಯೋನಾರಾಯನ್ ಹೊಡೆದ ಬಿರುಸಿನ ಹೊಡೆತವನ್ನು ಕ್ಯಾಚ್ ಮಾಡಿದ ರೀತಿ ಮೈಸೂರಿನ ಪ್ರೇಕ್ಷಕರ ನೆನಪಿನಂಗಳದಲ್ಲಿ ಬಹಳ ಕಾಲ ಉಳಿಯುತ್ತದೆ.
ಪಂದ್ಯದ ನಂತರ ಮಾತನಾಡಿದ ಅವರು, ‘ಮೊದಲ ದಿನದ ಎರಡು ಅವಧಿಯಲ್ಲಿ ಸ್ವಲ್ಪ ನಿರಾಸೆಯಾದರೂ, ಐದು ವಿಕೆಟ್ ಗಳಿಕೆಯ ಸಾಧನೆ ಖುಷಿ ತಂದಿದೆ‘ ಎಂದು ಹೇಳಿದರು.