ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ಬಿಐ), ರೋಟರಿ ಬೆಂಗಳೂರು ಐಟಿ ಕಾರಿಡಾರ್(ಆರ್ಬಿಐಟಿಸಿ) ಸಂಸ್ಥೆಯ ಸಹಭಾಗಿತ್ವದಲ್ಲಿ ಡಿ.14ರ ಮಧ್ಯರಾತ್ರಿ ‘ಬೆಂಗಳೂರು ಮಿಡ್ನೈಟ್ ಮ್ಯಾರಥಾನ್’ (ಬಿಎಂಎಂ) ಆಯೋಜಿಸಿದೆ. ‘ಮಿಲ್ಖಾಸಿಂಗ್ ಈ ವರ್ಷದ ಮ್ಯಾರಥಾನ್ ರಾಯಭಾರಿ. ಬ್ಯಾಂಕಿನ ಕಾರ್ಪೊ ರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಕಾರ್ಯಕ್ರಮದಡಿ ‘ಬಿಎಂಎಂ’ ನಡೆಯುತ್ತಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ‘ಎಸ್ಬಿಐ’ ಚೀಫ್ ಜನರಲ್ ಮ್ಯಾನೇಜರ್ ಅಶ್ವಿನಿ ಮೆಹ್ರಾ ಹೇಳಿದರು.
‘ಎಟಿಎಂ’ ಭದ್ರತೆ
ರಾಜ್ಯದಲ್ಲಿ ‘ಎಸ್ಬಿಐ’ನ 1,280 ‘ಎಟಿಎಂ’ಗಳಿವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ 24x7 ಮಾದರಿಯಲ್ಲಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯ ಪೊಲೀಸ್ ಇಲಾಖೆ ಸೂಚಿಸಿರುವಂತೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಹೆಚ್ಚುವರಿ ಭದ್ರತೆ ಅಳವಡಿ ಸಲು ಸೇವಾ ಪೂರೈಕೆ ಕಂಪೆನಿಗಳ ಜತೆಗೆ ಮಾತುಕತೆ ನಡೆಸುತ್ತಿದ್ದೇವೆ.
ಬ್ಯಾಂಕಿನ ಮುಂಬೈ ಕಾರ್ಪೊರೇಟ್ ಕಚೇರಿಯಿಂದ ಸೂಚನೆ ಬಂದ ನಂತರ ಹೆಚ್ಚುವರಿ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಅವರು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.
ಗೃಹಸಾಲ ವಿತರಣೆಯಲ್ಲಿ ಬೆಂಗಳೂರು ವೃತ್ತ ಮುಂಬೈ ನಂತರದ (ಎರಡನೇ) ಸ್ಥಾನದಲ್ಲಿದೆ. ಶೈಕ್ಷಣಿಕ ಸಾಲಕ್ಕೂ ಬೇಡಿಕೆ ಹೆಚ್ಚಿದೆ. ಆದರೆ, ಆರ್ಥಿಕ ಅಸ್ಥಿರತೆಯಿಂದ ‘ಎಂಎಸ್ಎಂಇ’ ಸಾಲದ ಬೇಡಿಕೆ ತಗ್ಗಿದೆ. ಉತ್ತಮ ಮುಂಗಾರು ಲಭಿಸಿರುವುದ ರಿಂದ ಈ ಬಾರಿ ಕೃಷಿ ಸಾಲದ ಬೇಡಿಕೆ ಮತ್ತು ಮರುಪಾವತಿ ಎರಡೂ ಹೆಚ್ಚುವ ಸಾಧ್ಯತೆ’ ಎಂದರು.