ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತ್ರರಾಷ್ಟ್ರಗಳಲ್ಲಿ ಅಪನಂಬಿಕೆ ಬೇಡ

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್): ಒಸಾಮಾ ಬಿನ್ ಲಾಡೆನ್ ಸಹಚರರು, ಬೆಂಬಲಿಗರು ಮತ್ತು ನಿಕಟ ಸಂಪರ್ಕ ಹೊಂದಿದ ವ್ಯಕ್ತಿಗಳನ್ನು ಗುರುತಿಸುವ ಉದ್ದೇಶದಿಂದ ಪಾಕಿಸ್ತಾನದ ಗುಪ್ತಚರ ಇಲಾಖೆ ಹಲವಾರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿರುವುದು ಇಲ್ಲವೇ ವಿಚಾರಣೆಗೆ ಒಳಪಡಿಸಿರುವುದು ನಿಜ ಎಂದು ಪಾಕ್ ಒಪ್ಪಿಕೊಂಡಿದೆ.

ನಿಯತಕಾಲಿಕೆಯ ವೆಬ್‌ಸೈಟ್‌ವೊಂದಕ್ಕೆ ಬರೆದ ಲೇಖನವೊಂದರಲ್ಲಿ ಅಮೆರಿಕದಲ್ಲಿರುವ ಪಾಕಿಸ್ತಾನದ ರಾಯಭಾರಿ ಹುಸೇನ್ ಹಕ್ಕಾನಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಲಾಡೆನ್ ಹತ್ಯೆಯ ನಂತರ ಎದ್ದಿರುವ ಹಲವು ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.

`ಲಾಡೆನ್‌ನನ್ನು ಸೆರೆ ಹಿಡಿಯಲು ಅಮೆರಿಕ ಸೇನೆಗೆ ನೆರವಾದ ಮತ್ತು ಮಾಹಿತಿ ನೀಡಿದ ವ್ಯಕ್ತಿಗಳನ್ನು ಹಿಡಿದು ಪಾಕ್ ಗುಪ್ತಚರ ಇಲಾಖೆ ಶಿಕ್ಷಿಸುತ್ತಿದೆ~ ಎಂಬ ಸುದ್ದಿ ಅಮೆರಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆದುಕೊಂಡಿತ್ತು. ಇದು ಅಮೆರಿಕ ಪ್ರಜೆಗಳ ಭಾರಿ ಆಕ್ರೋಶಕ್ಕೂ ಕಾರಣವಾಗಿತ್ತು.

ಲಾಡೆನ್ ಹತ್ಯೆಗೆ ಅಮೆರಿಕ ನಡೆಸಿದ ರಹಸ್ಯ ಕಾರ್ಯಾಚರಣೆಯಿಂದ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಆದ ಅವಮಾನ, ಮುಜುಗರ ಮತ್ತು ಅಸಮಾಧಾನವನ್ನು ಹಕ್ಕಾನಿ ಈ ಲೇಖನದಲ್ಲಿ ಹೊರಗೆಡವಿದ್ದಾರೆ.

`ಲಾಡೆನ್‌ಗೆ ನೆರವು ನೀಡಿದ ವ್ಯಕ್ತಿಗಳ ವಿರುದ್ಧ ಪಾಕ್ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಈಗ ಆ ಕೆಲಸಕ್ಕೆ ಮುಂದಾದರೆ ಅದಕ್ಕೂ ಅಪವಾದ ಹೋರಿಸಲಾಗಿದೆ~ ಎಂದು ಲೇಖನದಲ್ಲಿ ವಿವರಿಸಿದ್ದಾರೆ. `ವಿದೇಶದ ಗುಪ್ತಚರ ವಿಭಾಗದೊಂದಿಗೆ ಕೈಜೋಡಿಸಿದ ಆರೋಪದ ಮೇಲೆ ಬಂಧಿಸಲಾದ ಕೆಲವು ವ್ಯಕ್ತಿಗಳನ್ನು ಪಾಕ್ ಗೂಢಚರ ವಿಭಾಗದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿರಬಹುದು...~ ಎಂದಿದ್ದಾರೆ.

`ಲಾಡೆನ್ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದು ಹೇಗೆ ಎಂಬ ವಿಷಯವನ್ನು ಉನ್ನತ ಮಟ್ಟದ ಆಯೋಗವೊಂದು ಪತ್ತೆ ಹಚ್ಚುತ್ತಿದೆ. ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ ನಮ್ಮ ಗುಪ್ತಚರ ಇಲಾಖೆಯನ್ನು ಹೇಗೆ ಬಲಪಡಿಸಬೇಕು ಎಂಬ ಪಾಠವನ್ನು ಲಾಡೆನ್ ಪ್ರಕರಣ ಕಲಿಸಿದೆ~ ಎಂದು ಹಕ್ಕಾನಿ ಒಪ್ಪಿಕೊಂಡಿದ್ದಾರೆ.

`ವಿದೇಶಿ ಪಡೆಗಳು ಪಾಕ್ ಸರ್ಕಾರಕ್ಕೆ ವಿಷಯ ತಿಳಿಸದೆ ಅದರ ವಾಯುಗಡಿಯನ್ನು ಉಲ್ಲಂಘಿಸಿ ನಡೆಸಿದ ಕಾರ್ಯಾಚರಣೆ ಕುರಿತು ಉನ್ನತ ಮಟ್ಟದ ಆಯೋಗ ತನಿಖೆ ನಡೆಸಲಿದೆ~ ಎಂದು ಅಮೆರಿಕಕ್ಕೆ ತಿರುಗೇಟು ನೀಡಿದ್ದಾರೆ. `ಮಿತ್ರ ರಾಷ್ಟ್ರಗಳು ಬೇಹುಗಾರಿಕಾ ಮಾಹಿತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ವಾಡಿಕೆ. ಆದರೆ, ಪರಸ್ಪರ ಬೇಹುಗಾರಿಕೆ ಮಾಡುವುದು ಸರಿಯಲ್ಲ~ ಎಂದು ಅವರು ಕಿಡಿಕಾರಿದ್ದಾರೆ.

`ಲಾಡೆನ್ ಹತ್ಯೆ ಕಾರ್ಯಾಚರಣೆಯನ್ನು ಪಾಕ್‌ನಿಂದ ಅಮೆರಿಕ ರಹಸ್ಯವಾಗಿ ಇಟ್ಟ ವಿಷಯ ಅನೇಕ ಪ್ರಶ್ನೆಗಹುಟ್ಟುಹಾಕಿದೆ. ಇದರಿಂದಾಗಿ ಉಭಯ ದೇಶಗಳ ಬಾಂಧವ್ಯವನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ. ಜತೆಗೆ ಹೊರ ಜಗತ್ತಿಗೆ ನಕಾರಾತ್ಮಕ ಸಂದೇಶ ಕಳುಹಿಸಿದೆ~ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಗಳಲ್ಲಿ ಪರಸ್ಪರ ನಂಬುಗೆ, ವಿಶ್ವಾಸ ಅಗತ್ಯ. ಅದು ಕೌಟುಂಬಿಕ ಸಂಬಂಧವೇ ಆಗಿರಬಹುದು ಅಥವಾ ದೇಶಗಳ ನಡುವಿನ ಬಾಂಧವ್ಯವೇ ಆಗಿರಬಹುದು. ಎರಡೂ ಕಡೆಯಿಂದಲೂ ಪೂರಕ ಪ್ರತಿಕ್ರಿಯೆಗಳಿರಬೇಕು. ಅಂದಾಗ ಮಾತ್ರ ಸಂಬಂಧಗಳು ಗಟ್ಟಿಗೊಳ್ಳುತ್ತವೆ ~ ಎಂದು ಹಕ್ಕಾನಿ ಸಲಹೆ ಮಾಡಿದ್ದಾರೆ.

`ಕಾಶ್ಮೀರ: ಯುದ್ಧ ಪರಿಹಾರವಲ್ಲ~

ಇಸ್ಲಾಮಾಬಾದ್(ಐಎಎನ್‌ಎಸ್/ಪಿಟಿಐ): ನೆರೆಯ ಭಾರತದೊಂದಿಗೆ ದಶಕಗಳಿಂದ ಕಗ್ಗಾಂಟಾಗಿರುವ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಯುದ್ಧವೊಂದೇ ಏಕೈಕ ಮಾರ್ಗವಲ್ಲ ಎಂದು ಪಾಕಿಸ್ತಾನ ಹೇಳಿದೆ.

ಪರಸ್ಪರ ತಿಳಿವಳಿಕೆ, ಸಂಧಾನ ಮತ್ತು ಮಾತುಕತೆಯ ಮೂಲಕ ಮಾತ್ರ ಕಾಶ್ಮೀರ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂಬ ನಿಲುವನ್ನು ಪಾಕ್ ಸ್ಪಷ್ಟಪಡಿಸಿದೆ. ಪಂಜಾಬ್ ಪ್ರಾಂತ್ಯದ ಸಾರ್ವಜನಿಕ ಸಭೆಯೊಂದರಲ್ಲಿ ಭಾನುವಾರ ಮಾತನಾಡಿದ ಪಾಕ್ ಪ್ರಧಾನ ಮಂತ್ರಿ ಯುಸೂಫ್ ರಜಾ ಗಿಲಾನಿ `ಯುದ್ಧದಲ್ಲಿ ನಮಗೆ ನಂಬುಗೆ ಇಲ್ಲ~ ಎಂದಿದ್ದಾರೆ.

ಪಾಕಿಸ್ತಾನ ತನ್ನ ನೆರೆಯ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧ ಕಾಯ್ದುಕೊಳ್ಳಲು ಬಯಸುತ್ತದೆ. ಕಾಶ್ಮೀರ ವಿವಾದ ಸೇರಿದಂತೆ ಭಾರತದೊಂದಿಗಿನ ಎಲ್ಲ ಸಮಸ್ಯೆಗಳಿಗೆ ಮಾತುಕತೆಯ ಮೂಲಕವೇ  ಪರಿಹಾರ ಕಂಡುಹಿಡಿಯುವ ನಿಲುವಿಗೆ ಪಾಕ್ ಬದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

`ಸಮಸ್ಯೆಗಳನ್ನು ಸೌಹಾರ್ದಯುತ ವಾತಾವರಣದಲ್ಲಿ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳೋ ಣ. ಯುದ್ಧ ಬೇಡ~ ಎಂದು ಸಿಂಗ್ ಅವರಿಗೆ ಮನವರಿಕೆ ಮಾಡಿಕೊಟ್ಟಿರುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT