ಬಾಗಲಕೋಟೆ: ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನ ಹಾನಗಲ್ ಕುಮಾರೇಶ್ವರ ಆಸ್ಪತ್ರೆಯಲ್ಲಿ ಒಂದು ವರ್ಷದ ಮಗುವಿನ ಮಿದುಳಿನಲ್ಲಿ ಬೆಳೆದಿದ್ದ ನೀರಿನ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು.
ಬಾದಾಮಿ ತಾಲ್ಲೂಕಿನ ಹಿರೇ ಮುಚ್ಚಳಗುಡ್ಡ ಗ್ರಾಮದ ಭೀಮಪ್ಪ ಕೆಂಚಳವರ ಎಂಬ ಮಗುವನ್ನು ಪಾಲಕರು ಸಹಜ ಚಿಕಿತ್ಸೆಗೆಂದು ಕುಮಾರೇಶ್ವರ ಆಸ್ಪತ್ರೆಗೆ ಕರೆ ತಂದಾಗ ಮೆದುಳಿನಲ್ಲಿ ಬೆಳೆದಿದ್ದ ನೀರಿನ ಗಡ್ಡೆಯನ್ನು ಪರಿಶೀಲಿಸಿ ಚಿಕಿತ್ಸೆ ನೀಡಲಾಯಿತು.
ಸುಮಾರು ರೂ.80 ಸಾವಿರ ವೆಚ್ಚದ ಶಸ್ತ್ರಚಿಕಿತ್ಸೆಯನ್ನು ಬಾಲ ಸಂಜೀವಿನಿ ಯೋಜನೆಯಡಿ ಕೇವಲ ರೂ.35 ಸಾವಿರ ರಿಯಾಯತಿ ದರದಲ್ಲಿ ನೀಡಲಾಯಿತು.
ಕುಮಾರೇಶ್ವರ ಆಸ್ಪತ್ರೆಯ ನರ ರೋಗ ವಿಭಾಗದ ಡಾ. ಜಗದೀಶ ವಿ. ಮೊರಬ ಅತಿ ಸೂಕ್ಷ್ಮವಾಗಿ ಶಸ್ತ್ರಚಿಕಿತ್ಸೆ ನೀಡಿ ನೀರಿನ ಗಡ್ಡೆ ಹೊರ ತೆಗೆದಿದ್ದಾರೆ. ಮಗು ಸಂಪೂರ್ಣ ಗುಣಮುಖವಾಗಿದೆ.
ಡಾ, ಜಗದೀಶ ಮೊರಬ ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿರುದ್ಧಿ ಇಲಾಖೆ ಅಧಿಕಾರಿಗಳು, ಬ.ವಿ.ವಿ ಸಂಘದ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶಟ್ಟರ್, ಪ್ರಾಂಶುಪಾಲ ಡಾ.ಅಶೋಕ ಮಲ್ಲಾಪೂರ, ಡೀನ್ ಡಾ.ಟಿ.ಎಂ. ಚಂದ್ರಶೇಖರ ಅಭಿನಂದಿಸಿದ್ದಾರೆ.