ಬೊಮ್ಮನಹಳ್ಳಿ: ಶೆಡ್ನಲ್ಲಿ ನಿಲ್ಲಿಸಿದ್ದ ನಾಲ್ಕು ಮಿನಿ ಬಸ್ಗಳಿಗೆ ಬೆಂಕಿ ಬಿದ್ದು, ಮಿನಿಬಸ್ವೊಂದರ ಒಳಗೆ ಮಲಗಿದ್ದ ಹುಚ್ಚೇಗೌಡ (35) ಎಂಬ ಚಾಲಕ ಸಾವನ್ನಪ್ಪಿರುವ ಘಟನೆ ಬೊಮ್ಮನಹಳ್ಳಿ ಬಳಿಯ ಹೊಂಗಸಂದ್ರದಲ್ಲಿ ಸೋಮವಾರ ನಡೆದಿದೆ.
ದಾವಣಗೆರೆ ಮೂಲದ ಹುಚ್ಚೇಗೌಡ ಬಸವೇಶ್ವರ ಟ್ರಾವೆಲ್ಸ್ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. 4 ತಿಂಗಳ ಹಿಂದೆ ಕೆಲಸ ಸೇರಿದ್ದ ಅವರು, ನಿತ್ಯ ಕೆಲಸ ಮುಗಿದ ನಂತರ ಮಿನಿಬಸ್ನಲ್ಲೇ ಮಲಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹುಚ್ಚೇಗೌಡ ಎಂದಿನಂತೆ ಕೆಲಸ ಮುಗಿಸಿಕೊಂಡು, ಮಿನಿಬಸ್ನಲ್ಲೇ ಮಲಗಿದ್ದಾರೆ. ಬೆಳಗಿನ ಜಾವ ಬಸ್ಗಳಿಗೆ ಬೆಂಕಿ ಬಿದ್ದಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಸ್ಥಳೀಯರು ಕೂಡಲೇ ನೀರು ಎರಚಿ ಬೆಂಕಿ ನಂದಿಸಿದ್ದಾರೆ. ಆದರೆ, ಆ ವೇಳೆಗಾಗಲೇ ಮಿನಿಬಸ್ ಒಳಗೆ ಮಲಗಿದ್ದ ಚಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂಬುದು ಗೊತ್ತಾಗಿಲ್ಲ. ಮೂರು ಮಿನಿಬಸ್ಗಳು ಸಂಪೂರ್ಣ ಸುಟ್ಟು ಹೋಗಿದ್ದು, ಒಂದು ಬಸ್ ಭಾಗಶಃ ಸುಟ್ಟಿದೆ.
ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ ಎಂದು ಮಡಿವಾಳ ಪೊಲೀಸರು ತಿಳಿಸಿದ್ದಾರೆ.