ವಿಜಾಪುರ: ಇಲ್ಲಿಯ ಭೂತನಾಳ ಕೆರೆ ಬಳಿ ಸ್ಥಾಪನೆಯಾಗಿರುವ ಒಳನಾಡು ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರವನ್ನು ರೂ 2.33 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಿಂದ ಉತ್ತರ ಕರ್ನಾಟಕದಲ್ಲಿ ಮೀನು ಕೃಷಿಗೆ ಉತ್ತೇಜನ ದೊರೆಯಲಿದೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅವರು ಸೋಮವಾರ ಹೇಳಿದರು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಪ್ರಾಯೋಜಕತ್ವದಲ್ಲಿ ಇಲ್ಲಿಯ ಭೂತನಾಳ ಕೆರೆ ಬಳಿ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಆರಂಭಿಸಿರುವ ಒಳನಾಡು ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬೀದರನ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ಹೊನ್ನಪ್ಪಗೋಳ, ಸದ್ಯ ಈ ಕೇಂದ್ರ ಎರಡು ಎಕರೆಯಲ್ಲಿ ತಲೆ ಎತ್ತಿದ್ದು, ಇನ್ನೂ ಏಳು ಎಕರೆ ಜಮೀನು ನೀಡಲು ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಸಿಇಒ ಎ.ಎನ್. ಪಾಟೀಲ ಮಾತನಾಡಿದರು. ಕೇಂದ್ರದ ಮುಖ್ಯಸ್ಥ ಡಾ.ಕೆ.ವಿ. ಮೊಹಿರೆ, ಡಾ.ಎಚ್. ಚನ್ನೇಗೌಡ, ಮೋನಪ್ಪ ಕರಕೇರಾ, ಶೋಭಾವತಿ ಫುಲಾರೆ, ಡಾ.ದೇವರಾಜ, ದೊಡ್ಡಮನಿ ಇತರರು ವೇದಿಕೆಯಲ್ಲಿದ್ದರು. ಸಂಶೋಧನಾ ನಿರ್ದೇಶಕ ಡಾ.ಎಸ್. ಯತಿರಾಜ್ ಸ್ವಾಗತಿಸಿದರು.