ಬೆಂಗಳೂರು: ಇಟಲಿಯ ಹಡಗಿನ ಸಿಬ್ಬಂದಿ ಕೇರಳದ ಇಬ್ಬರು ಮೀನುಗಾರರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿ ಇಟಲಿ ವಿದೇಶಾಂಗ ಸಚಿವರ ಜೊತೆ ಚರ್ಚೆ ನಡೆಸಲಾಗುವುದು ಎಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ತಿಳಿಸಿದರು.
ಭಾನುವಾರ ಈ ಕುರಿತು ಪತ್ರಕರ್ತರ ಜೊತೆ ಮಾತನಾಡಿದ ಅವರು, `ಈ ಪ್ರಕರಣದಿಂದಾಗಿ ಭಾರತ ಮತ್ತು ಇಟಲಿ ನಡುವಣ ಸೌಹಾರ್ದಯುತ ಸಂಬಂಧಕ್ಕೆ ಧಕ್ಕೆಯಾಗಿಲ್ಲ. ದ್ವಿಪಕ್ಷೀಯ ಸಂಬಂಧ ಹಾಗೆಯೇ ಮುಂದುವರಿಯುತ್ತದೆ. ಆದರೆ, ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿ ಇಟಲಿ ವಿದೇಶಾಂತ ಸಚಿವರೊಂದಿಗೆ ಮಾತನಾಡುತ್ತೇನೆ~ ಎಂದರು.
ದೋಣಿಯಲ್ಲಿದ್ದ ಕೇರಳದ ಮೀನುಗಾರರು ಮೀನು ಮತ್ತು ಮೀನಿನ ಬಲೆಗಳನ್ನು ಮಾತ್ರ ಸಾಗಿಸುತ್ತಿದ್ದರು. ಆದರೆ ಇಟಲಿಯ ಹಡಗಿನ ಸಿಬ್ಬಂದಿ ದೋಣಿಯ ಮೇಲೆ ಗುಂಡು ಹಾರಿಸಿ ಮೀನುಗಾರರನ್ನು ಹತ್ಯೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಜೊತೆಗೂ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.