ಬೆಂಗಳೂರು: `ಬಿಬಿಎಂಪಿ ನಿರ್ವಹಿಸುತ್ತಿರುವ ಕೆರೆಗಳಲ್ಲಿ ಇನ್ನು ಮುಂದೆ ಮೀನುಗಾರಿಕೆಗೆ ಅವಕಾಶ ನೀಡದಂತೆ ನಿರ್ಣಯವೊಂದನ್ನು ಅಂಗೀಕರಿಸಲಾಗುವುದು~ ಎಂದು ಉಪಮೇಯರ್ ಎಸ್.ಹರೀಶ್ ನುಡಿದರು.
ನಗರದ ಸರ್ಜಾಪುರ ರಸ್ತೆಯಲ್ಲಿರುವ ಕೈಕೊಂಡ್ರಹಳ್ಳಿ ಕೆರೆಯಲ್ಲಿ ಶುಕ್ರವಾರ ಮೂರು ನೀರು ಹಾವು ಮತ್ತು ಒಂದು ಕಲ್ಲು ಆಮೆಯನ್ನು ಕೆರೆಗೆ ಬಿಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮೀನುಗಾರಿಕೆ ಇಲಾಖೆಯು ವಿವಿಧ ಕೆರೆಗಳಲ್ಲಿ ಖಾಸಗಿಯವರು ಮೀನುಗಾರಿಕೆ ನೀಡಲು ಗುತ್ತಿಗೆ ನೀಡಿದೆ. ಮೀನುಗಾರರು ಬೃಹತ್ ಬಲೆಗಳನ್ನು ಕೆರೆಯಲ್ಲಿ ಅಳವಡಿಸುತ್ತಿರುವುದರಿಂದ ಹಾವು, ಆಮೆಯಂತ ಜಲಚರಗಳೂ ಆ ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿವೆ. ಇದನ್ನು ತಡೆಗಟ್ಟಲು ನಿರ್ಣಯ ಕೈಗೊಳ್ಳುವ ಸಂಬಂಧ ಮುಂದಿನ ಪಾಲಿಕೆ ಸಭೆಯಲ್ಲಿ ಚರ್ಚಿಸಲಾಗುವುದು~ ಎಂದರು.
ಬಲೆಗಳನ್ನು ಹಾಕಿ ಜಲಚರಗಳನ್ನು ಕೊಲ್ಲುವ ಪ್ರಕ್ರಿಯೆ ಒಂದೆಡೆ ನಡೆಯುತ್ತಿದ್ದರೆ ನೀವು ಅವುಗಳನ್ನೇ ಹಿಡಿದು ಅದೇ ಕೆರೆಯಲ್ಲಿ ಬಿಡುತ್ತಿದ್ದಿರಲ್ಲಾ ಎಂಬ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ ಅವರು, `ಬಿಬಿಎಂಪಿ ನಿರ್ವಹಣೆಯಲ್ಲಿರುವ ಕೆರೆಗಳಲ್ಲಿ ಇಲಾಖೆ ನೀಡಿದ ಗುತ್ತಿಗೆ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಕೆರೆಯ ಪಕ್ಕದಲ್ಲಿಯೇ ಇರುವ ಶ್ರೀ ರೇಣುಕಾ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಹರೀಶ್, ಹಾವುಗಳು ಕಂಡುಬಂದಲ್ಲಿ ಕೂಡಲೇ ಬಿಬಿಎಂಪಿಯ ಅರಣ್ಯ ಘಟಕಕ್ಕೆ ತಿಳಿಸಬೇಕು. ಘಟಕದ ಸ್ವಯಂಸೇವಕರು ಅವುಗಳನ್ನು ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುತ್ತಾರೆ~ ಎಂದರು.