ಕಾರವಾರ: ಪರಿಸರ ಮಾಲಿನ್ಯ ದೂರಿನ ಹಿನ್ನೆಲೆಯಲ್ಲಿ ನಗರದ ಬೈತಖೋಲದಲ್ಲಿರುವ ಸಾಯಿ ಅನ್ನಪೂರ್ಣೇಶ್ವರಿ ಬಯೋ ಪ್ರೊಟಿನ್ ಪ್ರೈವೇಟ್ ಲಿಮಿಟೆಡ್ನ ಮೀನೆಣ್ಣೆ ಘಟಕಕ್ಕೆ ಮಂಗಳವಾರ ತಹಶೀಲ್ದಾರ್ ಸಾಜಿದ್ ಮುಲ್ಲಾ ನೇತೃತ್ವದಲ್ಲಿ ಬೀಗ ಹಾಕಲಾಯಿತು.
ಘಟಕದಿಂದ ಪರಿಸರ ಮಾಲಿನ್ಯವಾಗುತ್ತಿರುವ ಬಗ್ಗೆ ಬೆಂಗಳೂರಿನ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆಯು ಜಿಲ್ಲಾಧಿಕಾರಿಗೆ ಪತ್ರ ಬರೆದು ಘಟಕಕ್ಕೆ ಬೀಗ ಹಾಕಲು ಸೂಚಿಸಿತ್ತು. ಜಿಲ್ಲಾಧಿಕಾರಿ ಇಮ್ಕೊಂಗ್ಲಾ ಜಮೀರ್ ನಿರ್ದೇಶನದಂತೆ ತಹಶೀಲ್ದಾರ್ ಘಟಕಕ್ಕೆ ಬೀಗ ಹಾಕಿದರು.
ಕಂದಾಯ ನಿರೀಕ್ಷಕ ಪರಶುರಾಮ ನಾಯ್ಕ, ಸರ್ಕಲ್ ಇನ್ಸ್ಪೆಕ್ಟರ್ ಎನ್.ಆರ್. ಮುಕ್ರಿ, ಸಬ್ ಇನ್ಸ್ಪೆಕ್ಟರ್ ಆನಂದ ಮೂರ್ತಿ ಹಾಗೂ ಸಿಬ್ಬಂದಿ ಹಾಜರಿದ್ದರು. ಘಟಕದಲ್ಲಿ ಒಟ್ಟು 110 ಕಾರ್ಮಿಕರಿದ್ದರು. ಈ ಪೈಕಿ 40 ಮಂದಿ ಸ್ಥಳೀಯರು ಇದ್ದಾರೆ. ಪರಿಸರ ಮಾಲಿನ್ಯ ಹಿನ್ನೆಲೆಯಲ್ಲಿ ಈ ಘಟಕಕ್ಕೆ ಬೀಗ ಹಾಕುತ್ತಿರುವುದು ಇದು ಮೂರನೇ ಬಾರಿಯಾಗಿದೆ.