ತುರುವೇಕೆರೆ: ಮೀಸಲಾತಿ ಜನ್ಮ ಸಿದ್ಧ ಹಕ್ಕಲ್ಲ, ಅದೊಂದು ಸಾಂವಿಧಾನಿಕ ರಕ್ಷಣೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮೀಸಲಾತಿ ಮೂಲಕ ಸಿಗುವ ಸವಲತ್ತುಗಳ ಸದುಪಯೋಗ ಮಾಡಿಕೊಂಡು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಮಾನತೆ ಸಾಧಿಸಬೇಕು ಎಂದು ಹಿರಿಯ ದರ್ಜೆ ಸಿವಿಲ್ ನ್ಯಾಯಾಧೀಶ ಎಚ್.ಆರ್. ಬನ್ನಿಕಟ್ಟಿ ಸಲಹೆ ನೀಡಿದರು.
ಪ.ಪಂ. ಕಾನೂನು ಸೇವಾ ಸಮಿತಿ ಹಾಗೂ ಶ್ರೇಯಸ್ ಮಹಿಳಾ ಕೇಂದ್ರ ಶನಿವಾರ ಬಸವೇಶ್ವರ ದೇವಾಲಯದ ಆವರಣದಲ್ಲಿ ಪ.ಜಾತಿ ಮತ್ತು ಪಂಗಡದವರಿಗಾಗಿ ಏರ್ಪಡಿಸಿದ್ದ ವಿಶೇಷ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಅಸಮಾನತೆ ತೊಡೆದು ಹಾಕುವ ಇಚ್ಚಾಶಕ್ತಿ ಸರ್ಕಾರಕ್ಕೂ ಇರಬೇಕು. ನಿರ್ದಿಷ್ಟ ಉದ್ದೇಶಕ್ಕಾಗಿ ನೀಡುವ ಸರ್ಕಾರದ ಸವಲತ್ತು ಸಕಾಲದಲ್ಲಿ ಫಲಾನುಭವಿ ತಲುಪುತ್ತಿಲ್ಲ. ಮಧ್ಯವರ್ತಿಗಳು ಯೋಜನೆಗಳ ಲಾಭ ಪಡೆಯುತ್ತಿದ್ದು, ಅನುಸೂಚಿತ ವರ್ಗಗಳು ವಿಷವರ್ತುಲದಿಂದ ಈಚೆ ಬರಲಾರದೆ ತೊಳಲಾಡುವಂತಾಗಿದೆ ಎಂದು ಅವರು ವಿಷಾದಿಸಿದರು.
ವಕೀಲ ಪಿ.ಎಚ್.ಧನಪಾಲ್ ಮಾತನಾಡಿದರು. ಜೆಎಂಎಫ್ಸಿ ನ್ಯಾಯಾಧೀಶ ವೈ.ಕೆ.ಬೇನಾಳ್, ಪ.ಪಂ.ಅಧ್ಯಕ್ಷ ಆರ್.ಮಲ್ಲಿಕಾರ್ಜುನ್, ಉಪಾಧ್ಯಕ್ಷ ನಜೀರ್ ಅಹಮದ್, ವಕೀಲರ ಸಂಘದ ಅಧ್ಯಕ್ಷ ಸದಾಶಿವಪ್ಪ, ಸಮಾಜ ಕಲ್ಯಾಣಾಧಿಕಾರಿ ಸತ್ಯನಾರಾಯಣ್, ಸ್ಥಾಯಿ ಸಮಿತಿ ಅಧ್ಯಕ್ಷ ಪಾಂಡುರಂಗಯ್ಯ, ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ, ಸಾಂತ್ವನ ಕೇಂದ್ರದ ಅಧ್ಯಕ್ಷ ತಿಪ್ಪೇಸ್ವಾಮಿ, ವಕೀಲರಾದ ಪಿ.ಎಚ್.ಧನಪಾಲ್, ಡಿ.ಟಿ.ರಾಜಶೇಖರ್, ಎಲ್.ಟಿ.ಶಿವಮೂರ್ತಿ, ಮಂಜುನಾಥ್, ಎಚ್.ಡಿ.ಮಧು, ರೂಪ, ವರದಾಚಾರ್ ಉಪಸ್ಥಿತರಿದ್ದರು. ದೇವರಾಜ್ ಸ್ವಾಗತಿಸಿ, ನಿರೂಪಿಸಿದರು.