ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಪರ ಇರುವ ಪಕ್ಷ ಬೆಂಬಲಿಸಿ

Last Updated 8 ಅಕ್ಟೋಬರ್ 2012, 7:50 IST
ಅಕ್ಷರ ಗಾತ್ರ

ಮೈಸೂರು: ಎಲ್ಲ ರಾಜಕೀಯ ಪಕ್ಷಗಳು ಸಾಮಾಜಿಕ ನ್ಯಾಯದ ಪರ ಇಲ್ಲ. ಆರ್‌ಎಸ್‌ಎಸ್ ಮುಖವಾಡ ತೊಟ್ಟಿರುವ ಬಿಜೆಪಿ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿದೆ. ಹಾಗಾಗಿ ಮೀಸಲಾತಿ ಪರ ಇರುವವರನ್ನು ಮಾತ್ರ ಹಿಂದುಳಿದ ವರ್ಗ ಬೆಂಬಲಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.

ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ಘಟಕ ನಗರದ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದರು.

ಭಾರತದಂತಹ ಜಾತಿ ವ್ಯವಸ್ಥೆ ವಿಶ್ವದ ಯಾವ ದೇಶದಲ್ಲಿಯೂ ಇಲ್ಲ. ಜಾತಿ ವ್ಯವಸ್ಥೆ ಜೀವಂತವಾ ಗಿರುವ ಕಾರಣಕ್ಕೆ ಆರ್ಥಿಕ, ಸಾಮಾಜಿಕ ಅಸಮಾನತೆ ಹೆಚ್ಚುತ್ತಿದೆ. ಜಾತಿಯ ಕಾರಣಕ್ಕೆ ಶೋಷಿತ ವರ್ಗದ ಜನತೆ ಶಿಕ್ಷಣ, ರಾಜಕೀಯ ಸೇರಿದಂತೆ ಹಲವು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಜಾತಿ ರಹಿತ ಸಮಾಜ ನಿರ್ಮಾಣಕ್ಕಾಗಿ ಬುದ್ಧ, ಬಸವಣ್ಣನ ಕಾಲದಿಂದಲೂ ಹೋರಾಟಗಳು ನಡೆಯುತ್ತಿವೆ. ಆದರೂ ಶೂದ್ರರಿಗೆ ಅಧಿಕಾರ, ಸಂಪತ್ತಿನಲ್ಲಿ ಸಮಾನ ಪಾಲು ಸಿಕ್ಕಿಲ್ಲ. ಅವಕಾಶ ವಂಚಿತರಿಗೆ ವಿಶೇಷ ಸವಲತ್ತು ನೀಡಿ ಮುಖ್ಯವಾಹಿನಿಗೆ ತರಬೇಕು ಎಂದರು.

ಅಂಬೇಡ್ಕರ್ ಸಂವಿಧಾನಬದ್ಧವಾಗಿ ನೀಡಿದ ಮೀಸಲಾತಿ ಭಿಕ್ಷೆ ಅಲ್ಲ; ಶೋಷಿತ ವರ್ಗಗಳ ಜನ್ಮಸಿದ್ಧ ಹಕ್ಕು. ಆದರೆ ಬಿಜೆಪಿ, ಜೆಡಿಎಸ್ ಪಕ್ಷಗಳು ಇದನ್ನು ವಿರೋಧಿಸುತ್ತಾ ಬಂದಿವೆ. ಜಾತಿಯ ಹೆಸರಿನಲ್ಲಿ ಬಿಜೆಪಿ ಸರ್ಕಾರ ಅನುದಾನ ನೀಡಿ, ಮೀಸಲಾತಿ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ. ಈ ಹುನ್ನಾರ ಅರ್ಥ ಮಾಡಿಕೊಳ್ಳದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಕನಕದಾಸ, ವಾಲ್ಮೀಕಿ ಜಯಂತಿಗೆ ರಜೆ ಘೋಷಿಸಿ ಬಿಜೆಪಿ ಹಿಂದುಳಿದ ವರ್ಗಗಳ ಜನತೆಯ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಉಪ ಮುಖ್ಯಮಂತ್ರಿ  ಈಶ್ವರಪ್ಪ ಹಿಂದುಳಿದ ವರ್ಗಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಾದು ಲಿಂಗಾಯತರಿಗೆ ಪ್ರವರ್ಗ 2ಎ ಮೀಸಲಾತಿ ನೀಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೋಷಿತರ ಹಕ್ಕು ಕಿತ್ತುಕೊಂಡಿದ್ದಾರೆ. ಅವರದೇ ಪಕ್ಷದ ಸಂಸದ ರಾಮಾಜೋಯಿಸ್ ಅವರು ಸ್ಥಳೀಯ ಸಂಸ್ಥೆಗಳಲ್ಲಿ ನೀಡಿದ್ದ ಮೀಸಲಾತಿ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಿದ್ದರು.

ಮೀಸಲಾತಿ ವಿರೋಧಿ ಇತಿಹಾಸವನ್ನು ಹಿಂದುಳಿದ ವರ್ಗ ಅರಿಯಬೇಕು ಎಂದು ಹೇಳಿದರು.
ರಾಜೀವ್‌ಗಾಂಧಿ, ದೇವರಾಜ್ ಅರಸು ಸ್ಮಾರಕ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಶಾಸಕ ವಿ. ಶ್ರೀನಿವಾಸಪ್ರಸಾದ್, ಹಿಂದುಳಿದ ಹಾಗೂ ಪರಿಶಿಷ್ಟ ವರ್ಗಗಳ ನಾಯಕರನ್ನು ಜಾತಿಗೆ ಸೀಮಿತಗೊಳಿಸು ವುದು ತಪ್ಪು. ಅನೇಕ ಅಹಿಂದ ನಾಯಕರನ್ನು ಮೇಲ್ಜಾತಿಯ ಜನ ಸ್ವೀಕರಿಸುತ್ತಿಲ್ಲ. ಬಸವಣ್ಣ ಅವರು ಬ್ರಾಹ್ಮಣರಾಗಿದ್ದ ಕಾರಣಕ್ಕೆ ಸಮಾಜದ ನಾಯಕ ರಾದರು. ಆದರೆ ಹಿಂದುಳಿದ ವರ್ಗಗಳ ನಾಯಕರನ್ನು ಮಾತ್ರ ಆಯಾ ಜಾತಿಗೆ ಸೀಮಿತಗೊಳಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಟಿ ಉಮಾಶ್ರೀ, ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಮಾಜಿ ಅಧ್ಯಕ್ಷ ಹನುಮಾನ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

್ಲಕ್ ಕಾಂಗ್ರೆಸ್‌ನ ನೂತನ ಅಧ್ಯಕ್ಷರ ನೇಮಕಾತಿ ಪತ್ರ ಹಾಗೂ ಗುರುತಿನ ಚೀಟಿ ವಿತರಿಸಲಾಯಿತು.ಸಂಸದ ಎಚ್.ವಿಶ್ವನಾಥ್, ಶಾಸಕ ಎಂ.ಸತ್ಯನಾರಾಯಣ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್, ಜಿಲ್ಲಾ ಘಟಕದ ಅಧ್ಯಕ್ಷ ಕೋಟೆಹುಂಡಿ ಸಿ.ಮಹದೇವು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಧರ್ಮಸೇನ, ನಗರ ಘಟಕದ ಅಧ್ಯಕ್ಷ ಸಿ.ದಾಸೇಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಎ.ವೆಂಕಟೇಶ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕೆಪಿಸಿಸಿ ಸದಸ್ಯರಾದ ಕೆ.ಮರೀಗೌಡ, ಸಿ.ನರಸೇಗೌಡ ಹಾಜರಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT