ದಾವಣಗೆರೆ: ನಾಯಕ ಸಮಾಜದವರಿಗೆ ಶೇ. 7.5 ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಎಲ್.ಜಿ. ಹಾವನೂರ ನಾಯಕರ ಹೋರಾಟ ಸಮಿತಿ ವತಿಯಿಂದ ಸೋಮವಾರ ನಗರದಲ್ಲಿ ನಾಯಕ ಸಮಾಜದವರು ಅನಿರ್ದಿಷ್ಟ ಅವಧಿ ಧರಣಿಯನ್ನು ಆರಂಭಿಸಿದರು.
ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಾಜದ ನೂರಾರು ಮಂದಿ, ಕೇಂದ್ರ ಸರ್ಕಾರವು ಜನಗಣತಿ ಪ್ರಕಾರ ರಾಜಕೀಯ, ಶಿಕ್ಷಣ, ಉದ್ಯೋಗಕ್ಕೆ ನೀಡುತ್ತಿರುವಂತೆ ರಾಜ್ಯ ಸರ್ಕಾರವೂ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಸರ್ಕಾರಿ ನೌಕರಿ ಪಡೆದಿರುವ ಇತರ ವರ್ಗಕ್ಕೆ ಸೇರಿದವರನ್ನು ಕೆಲಸದಿಂದ ವಜಾಗೊಳಿಸಬೇಕು ಮತ್ತು ಆ ಹುದ್ದೆಗಳನ್ನು ಬ್ಯಾಕ್ಲಾಗ್ ಹುದ್ದೆಗಳೆಂದು ತೀರ್ಮಾನಿಸಿ ಅರ್ಹರನ್ನು ನೇಮಕ ಮಾಡಿಕೊಳ್ಳಬೇಕು.
ಸಂವಿಧಾನಬದ್ಧವಾಗಿ ಸಿಗಬೇಕಾದ ಸೌಲಭ್ಯಗಳು ಪರಿಶಿಷ್ಟ ಪಂಗಡವರಿಗೆ ಸಮರ್ಪಕವಾಗಿ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಹುಚ್ಚವ್ವನಹಳ್ಳಿ ಮಂಜುನಾಥ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಕರೂರು ನರೇಂದ್ರ, ಹುಚ್ಚವ್ವನಹಳ್ಳಿ ಅಜ್ಜಯ್ಯ, ಫಣಿಯಾಪುರ ಲಿಂಗರಾಜು, ಮಾಲತಿ ನಾಯಕ, ಪಾಮೇನಹಳ್ಳಿ ಗೌಡ್ರ ಶೇಖರಪ್ಪ, ರಾಜಾಚಂದ್ರಪ್ಪ ನಾಯಕ, ರಾಜ್ಕುಮಾರ್, ಕಾನನಕಟ್ಟೆ ತಿಪ್ಪೇಸ್ವಾಮಿ, ಪಾಲನಾಯಕನಕೋಟೆ ಮಾರನಾಯಕ ಪಾಲ್ಗೊಂಡಿದ್ದರು.