ವಿಜಾಪುರ:ಮೀಸಲಾತಿ ಸೌಲಭ್ಯಕ್ಕೆ ಆಗ್ರಹಿಸಿ ನಿಜಶರಣ ಅಂಬಿಗರ ಚೌಡಯ್ಯನವರ ಜನಾಂಗದ ಹಿತ ರಕ್ಷಣಾ ಸಮಿತಿಯವರು ಗುಲ್ಬರ್ಗ ಜಿಲ್ಲೆ ಘತ್ತರಗಿಯ ಭಾಗ್ಯವಂತಿ ದೇವಿ ದೇವಸ್ಥಾನದಿಂದ ಬೆಳಗಾವಿವರೆಗೆ ಹಮ್ಮಿಕೊಂಡಿರುವ ಬೈಕ್ ರ್ಯಾಲಿ ಭಾನುವಾರ ನಗರಕ್ಕೆ ಆಗಮಿಸಿತ್ತು.
ಸಿಂದಗಿಯ ಗುರುದೇವಾಶ್ರಮದ ಶಾಂತಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ನಗರದಲ್ಲಿ ರ್ಯಾಲಿ ನಡೆಸಿದ ಸಮಿತಿಯವರು ಬೆಳಗಾವಿಗೆ ಪ್ರಯಾಣ ಬೆಳೆಸಿದರು.ಟೋಕರೆ ಕೋಲಿಯ ಪರ್ಯಾಯ ಪದಜಾತಿಗಳಾದ ಕೋಲಿ, ಕಬ್ಬಲಿಗ, ತಳವಾರ, ಅಂಬಿಗ, ಬಾರಕೇರ ಜಾತಿಗಳಿಗೆ ಪರಿಶಿಷ್ಟ ಪಂಗಡದ ಮಾನ್ಯತೆ ನೀಡಬೇಕು. ಈ ಕುರಿತು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಟೋಕರೆ ಕೋಲಿ ಎಂದು ಶಾಲಾ ದಾಖಲಾತಿ ಹೊಂದಿರುವ ಎಲ್ಲ ಜನಾಂಗಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡಬೇಕು. ನಿಜಶರಣ ಅಂಬಿಗರ ಚೌಡಯ್ಯನವರ ಪ್ರಾಧಿಕಾರ ರಚಿಸಬೇಕು.
ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಪಡೆದು ಈಗಾಗಲೆ ಸರ್ಕಾರಿ ಸೇವೆಯಲ್ಲಿರುವ ಜನಾಂಗದ ನೌಕರರ ಸೇವೆಯನ್ನು ಅಕ್ರಮ ಎನ್ನಲಾಗುತ್ತಿದೆ. ಕಿರುಕುಳ ನಿಲ್ಲಿಸಿ ಅವರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಸಮಿತಿ ಪ್ರಮುಖರಾದ ಭರತ್ ಕೋಳಿ, ಸಾಹೇಬಗೌಡ ಬಿರಾದಾರ, ಶಿವಾನಂದ ಹಿಪ್ಪರಗಿ, ಚಂದ್ರಕಾಂತ ಕೋಳಿ, ಪ್ರದೀಪ, ಎಚ್.ಜಿ. ತೊನಶ್ಯಾಳ, ದುಂಡಪ್ಪ, ಪ್ರಕಾಶ, ಸಿದ್ದಣ್ಣ, ಕಿರಣ, ವಿಜಯ ಕೋಲಕಾರ ಸೇರಿದಂತೆ ಹಲವರು ರ್ಯಾಲಿಯಲ್ಲಿದ್ದರು.