ನವದೆಹಲಿ (ಪಿಟಿಐ): ಮುಂಗಾರು ಮಾರುತಗಳ ಚಲನೆಗೆ `ತಾಲೀಮ್~ ಬಿರುಗಾಳಿ ಅಡ್ಡಿಯಾಗಿದೆ ಎಂದಿರುವ ಭಾರತೀಯ ಹವಾಮಾನ ಇಲಾಖೆ, ನೈಋತ್ಯ ಮುಂಗಾರು ಮುಂದಿನ ವಾರದ ಉತ್ತರಾರ್ಧದಲ್ಲಿ ಚುರುಕುಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದೆ.
ರಾಷ್ಟ್ರದ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ರಾಷ್ಟ್ರದ ಬಹುತೇಕ ಕಡೆ ಈವರೆಗೆ ಮುಂಗಾರು ಮುನಿಸಿಕೊಂಡಿದ್ದು, ಭಾರಿ ಪ್ರಮಾಣದಲ್ಲಿ ಮಳೆ ಕೊರತೆ ಕಂಡುಬಂದಿದೆ. ಈಗಾಗಲೇ ಮುಂಗಾರಿನ ಒಂದು ತಿಂಗಳ ಅವಧಿ ಮುಗಿಯುತ್ತಾ ಬಂದಿದ್ದು ದೇಶದ ಶೇ 74ರಷ್ಟು ಪ್ರದೇಶ ಮಳೆ ಕೊರತೆಗೆ ತುತ್ತಾಗಿರುವುದು ರೈತಾಪಿ ಸಮುದಾಯ ಹಾಗೂ ಅದನ್ನು ಅವಲಂಬಿಸಿದ ಇತರ ಉದ್ದಿಮೆಗಳಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿದೆ.
ಜುಲೈನಲ್ಲಿ ಉತ್ತಮ ಮಳೆಯ ನಿರೀಕ್ಷೆಯಿದೆ. ಈಗಿನ ಅಂಕಿಅಂಶಗಳ ಹಾಗೂ ಚಿತ್ರಗಳ ವಿಶ್ಲೇಷಣೆಯ ಪ್ರಕಾರ, ಮುಂದಿನ ತಿಂಗಳು ಪೂರ್ವ, ಮಧ್ಯ ಹಾಗೂ ವಾಯವ್ಯ ಭಾರತದಲ್ಲಿ ಅಧಿಕ ಮಳೆ ಸುರಿಯಲಿದೆ ಎಂದು ಇಲಾಖೆಯ ಮಹಾ ನಿರ್ದೇಶಕರಾದ ಸ್ವಾತಿ ಬಸು ತಿಳಿಸಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರದ ಕೆಲವು ಭಾಗ, ಮಧ್ಯಪ್ರದೇಶ ಸೇರಿದಂತೆ ದೇಶದ ಶೇ 39ರಷ್ಟು ಪ್ರದೇಶದಲ್ಲಿ ಕಡಿಮೆ ಮಳೆ ಹಾಗೂ ಶೇ 35ರಷ್ಟು ಪ್ರದೇಶದಲ್ಲಿ ಅತಿ ಕಡಿಮೆ ಬೀಳುವ ಸಂಭವವಿದೆ. ರಾಷ್ಟ್ರದ ಇಡೀ ವಾಯವ್ಯ ಭಾಗ, ಗುಜರಾತ್, ಕಛ್, ರಾಯಲ್ಸೀಮಾ, ತಮಿಳುನಾಡುಗಳಲ್ಲಿ ಅತಿ ಕಡಿಮೆ ಮಳೆ ಬಿದ್ದಿದೆ.