ಪೀಣ್ಯ ದಾಸರಹಳ್ಳಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಿಗೆ ಕಾವೇರಿ ನೀರನ್ನು ಸೆಪ್ಪೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲನೆ ವಾರದಲ್ಲಿ ನೀರು ಸರಬರಾಜು ಮಾಡಲಾಗುವುದು ಎಂದು ಪಾಲಿಕೆ ಸದಸ್ಯ ಲಕ್ಷ್ಮೀಕಾಂತ್ ರೆಡ್ಡಿ ಹೇಳಿದರು.
ಲಗ್ಗೆರೆ ಗ್ರಾಮದಲ್ಲಿ ಕಾವೇರಿ ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆಯ ನೂತನ ಸಂಪರ್ಕ ಅರ್ಜಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾಲ್ಕನೇ ಹಂತದ ಪರೀಕ್ಷಾ ಕಾರ್ಯ ಆರಂಭವಾಗಿದ್ದು ಎಲ್ಲರ ಮಹಾದಾಸೆಯಂತೆ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಅರ್ಜಿಯಲ್ಲಿ ಪಾವತಿಸಬೇಕಾದ ಶುಲ್ಕದ ಬಗ್ಗೆ ಮಾಹಿತಿ ನೀಡಲಾಗಿದ್ದು ಅದರಂತೆ ನಾಗರಿಕರು ಹಣ ಪಾವತಿಸಿ ಗುತ್ತಿಗೆದಾರರಿಂದ ಸಂಪರ್ಕ ಪಡೆದುಕೊಳ್ಳಿ ಎಂದು ಅವರು ತಿಳಿಸಿದರು.
ಪಾಲಿಕೆ ಅಧಿಕಾರಿಗಳಾದ ಪುಟ್ಟಮಲ್ಲಪ್ಪ, ಶಿವರಾಮು, ಕುಮಾರನಾಯಕ್, ಕಲ್ಪನಾ, ರೇವಣಸಿದ್ಧಯ್ಯ ಮುಖಂಡರಾದ ಕಳಸಪ್ಪ, ಚಂದ್ರಮೋಹನ್, ಹರೀಶ್, ವೆಂಕಟೇಶ್ ಇತರರು ಹಾಜರಿದ್ದರು.