ಹುಬ್ಬಳ್ಳಿ: ನವೆಂಬರ್ ಕೊನೆಯ ವಾರ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಳ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರವೇ ಅಧಿವೇಶನ ದಿನಾಂಕ ಪ್ರಕಟಿಸುವುದಾಗಿ ಹೇಳಿದರು.
ಬೆಂಗಳೂರಿನ ವಿಧಾನಸೌಧ, ವಿಕಾಸಸೌಧದಲ್ಲಿರುವ ವಿವಿಧ ಇಲಾಖೆಗಳ ಹೆಚ್ಚುವರಿ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗವನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ವರ್ಗಾಯಿಸಲಾಗುವುದು ಎಂದರು.
ವಿವಿಧ ನಿಗಮ-ಮಂಡಳಿಗಳ ಹಾಗೂ ವಿಭಾಗಮಟ್ಟದ ಸಭೆಗಳು, ಉತ್ತರ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳ ಎಲ್ಲಾ ಆಡಳಿತಾತ್ಮಕ ವಿಚಾರಗಳ ಕುರಿತಾದ ಸಭೆಗಳನ್ನು ಬೆಳಗಾವಿಯಲ್ಲಿಯೇ ನಡೆಸಲು ಆದೇಶ ಹೊರಡಿಸಲಾಗುವುದು ಎಂದರು.
ಸಿ.ಎಂ ಆಗಿ ಮೊದಲ ಬಾರಿಗೆ ಕಿತ್ತೂರು ಉತ್ಸವ ಉದ್ಘಾಟಿಸುವ ಮೂಲಕ ಆ ಬಗೆಗಿನ ಪೂರ್ವಗ್ರಹಗಳನ್ನು ತೊಡೆದು ಹಾಕುವೆನು. ಚಾಮರಾಜನಗರಕ್ಕೆ ಹೋಗುವ ಉದ್ದೇಶವಿದ್ದು, `ಡಿಸೆಂಬರ್ವರೆಗೆ ಅಲ್ಲಿಗೆ ಹೋಗಬೇಡಿ~ ಎಂದು ಕೆಲವು ಆಪ್ತ ಸಚಿವರು ಸಲಹೆ ನೀಡಿದ ಕಾರಣ ಪ್ರವಾಸ ಮುಂದೂಡಿರುವುದಾಗಿ ಹೇಳಿದ ಶೆಟ್ಟರ್, ಸರ್ಕಾರದ ಅಸ್ತಿತ್ವದ ಬಗ್ಗೆ ಬಿಎಸ್ವೈ ಅವರ ಇತ್ತೀಚಿನ ಹೇಳಿಕೆಗಳು, ಉದ್ದೇಶಿತ ಹೊಸ ಪಕ್ಷದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.