ಮಂಡ್ಯ: ಸುಪ್ರೀಂಕೋರ್ಟ್ ಸೋಮವಾರ ನೀಡಲಿರುವ ತೀರ್ಪು ನೋಡಿಕೊಂಡು ಮುಂದಿನ ಹೋರಾಟದ ರೂಪರೇಷೆ ನಿರ್ಧರಿಸಲಾಗುವುದು. ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಸಿಬ್ಬಂದಿ ಹೋಗುವುದನ್ನು ತಡೆಯುವಂತಹ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಕರೆ ನೀಡಿದರು.
ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆದಿರುವ ಸರದಿ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ನೀಡಲು ಆಗಮಿಸಿದ್ದ ಅವರು, `ಮನೆಗೊಬ್ಬರಂತೆ ಜೈಲ್ಭರೋ ಚಳವಳಿಗೆ ಸಿದ್ಧರಾಗಿರಬೇಕು; ನೀರಿನ ಹಕ್ಕಿಗಾಗಿ ಹೋರಾಡಿ. ಜೈಲಿಗೆ ಹೋದರೆ ಗೌರವ ಹೆಚ್ಚಾಗುತ್ತದೆ~ ಎಂದರು.
`ಕೋರ್ಟ್ ತೀರ್ಪು ರಾಜ್ಯದ ಪರವಾಗಿ ಬರಲಿದೆ ಎಂಬ ನಂಬಿಕೆ ಇದೆ. ಒಂದು ವೇಳೆ ಬರದಿದ್ದರೆ, ಉಗ್ರ ಹೋರಾಟಕ್ಕೆ ಸಜ್ಜಾಗೋಣ~ ಎಂದರು.
ಬಳಿಕ ಜಿಲ್ಲೆಯ ಶಾಸಕರೊಂದಿಗೆ ಸಭೆ ನಡೆಸಿದ ಅವರು, ತೀರ್ಪಿನ ಕುರಿತು ಕೈಗೊಳ್ಳಬೇಕಾದ ಹೋರಾಟದ ಕುರಿತು ಚರ್ಚೆ ನಡೆಸಿದರು.
ರಸ್ತೆ ತಡೆ ಮುಂದುವರಿಕೆ
ಮಂಡ್ಯ, ಶ್ರೀರಂಗಪಟ್ಟಣ, ಗೆಜ್ಜಲಗೆರೆ, ಮದ್ದೂರು ಮುಂತಾದೆಡೆ ಬೆಂಗಳೂರು-ಮೈಸೂರು ಹೆದ್ದಾರಿ ತಡೆ ಭಾನುವಾರವೂ ಮುಂದುವರೆದಿದೆ. ವಿವಿಧ ಸಂಘಟನೆಗಳು, ಜಿಲ್ಲೆಯ ವಿವಿಧ ಗ್ರಾಮಸ್ಥರು ಪಾದಯಾತ್ರೆ ಮೂಲಕ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಶ್ರೀರಂಗಪಟ್ಟಣ ತಾಲ್ಲೂಕಿನ ಮೊಗ್ಗರಹಳ್ಳಿ ಬಳಿ ಬಸ್ಸಿನ ಗಾಜಿಗೆ ಕಲ್ಲು ಹೊಡೆದ ಘಟನೆ ನಡೆದಿದೆ.