ನವದೆಹಲಿ: ಸಂಪುಟ ರಚನೆ ಕಸರತ್ತು ಕಗ್ಗಂಟು ತಡರಾತ್ರಿವರೆಗೂ ಬಗೆಹರಿದಿರಲಿಲ್ಲ. ಉಭಯ ಬಣಗಳೂ ಸಚಿವ ಸ್ಥಾನ ಹಾಗೂ ಪ್ರಮುಖ ಖಾತೆಗಳಿಗಾಗಿ ಪೈಪೋಟಿ ಮುಂದುವರಿಸಿದ್ದರಿಂದ ಸಮಸ್ಯೆಗೆ ಪರಿಹಾರ ಸಿಗದೇ ಬಿಜೆಪಿ ವರಿಷ್ಠರು ಪರದಾಡಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ನಿವಾಸದಲ್ಲಿ ರಾತ್ರಿ ಹನ್ನೊಂದುವರೆಗೆ ಆರಂಭವಾದ ಸಭೆ ನಸುಕಿನ ಒಂದು ಗಂಟೆಯಾದರೂ ಮುಂದುವರೆದಿತ್ತು.ಅರುಣ್ ಜೈಟ್ಲಿ, ರಾಜನಾಥ್ ಸಿಂಗ್, ಅನಂತ್ಕುಮಾರ್, ಈಶ್ವರಪ್ಪ, ಜಗದೀಶ್ ಶೆಟ್ಟರ್, ಸಂತೋಷ್ ಮತ್ತು ಸತೀಶ್ ಸಭೆಯಲ್ಲಿ ಭಾಗವಹಿಸಿದ್ದರು.
ಉಭಯ ಬಣಗಳೂ ತಮ್ಮ ಪಟ್ಟನ್ನು ಮೇಲಿಂದ ಮೇಲೆ ಬಿಗಿಗೊಳಿಸುತ್ತಾ ಹೋದಂತೆ ಸಚಿವರ ಹೆಸರುಗಳು ಹಾಗೂ ಖಾತೆಗಳ ಪಟ್ಟಿಯೂ ಬದಲಾಗುತ್ತಾ ಹೋಯಿತು. ಒಂದು ಗಂಟೆ ಸುಮಾರಿಗೆ ಜೇಟ್ಲಿ ಮತ್ತು ರಾಜನಾಥ್ ಸಿಂಗ್ ಸಭೆಯಿಂದ ನಿರ್ಗಮಿಸಿದರೂ, ಉಳಿದವರು ಚರ್ಚೆ ಮುಂದುವರಿಸಿದ್ದರು.