ಸಕಲೇಶಪುರ: ತಾಲ್ಲೂಕಿನಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದ್ದು ಮಂಗಳವಾರ ಹಾಗೂ ಬುಧವಾರ ಜಾನೇಕೆರೆ, ಬಾಗರಹಳ್ಳಿ, ಸತ್ತಿಗಾಲ್, ಸುಳ್ಳಕ್ಕಿ, ಇಬ್ಬಡಿ, ಕೊಣ್ಣೂರು ಗ್ರಾಮಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಉಂಟು ಮಾಡಿವೆ.
ಒಂದು ಮರಿ ಸೇರಿದಂತೆ ಒಟ್ಟು ಐದು ಕಾಡಾನೆಗಳಿರುವ ಹಿಂಡು ಜಾನೇಕೆರೆ ಗ್ರಾಮದ ಜೆ.ಎಸ್. ಶಿವಕುಮಾರ್, ದೇವರಾಜ್ ಎಂಬುವರ ಭತ್ತದ ಸಸಿ ಮಡಿಯನ್ನು ತುಳಿದು ಹಾನಿ ಮಾಡಿವೆ. ಜೆ.ಎನ್. ಹರೀಶ್ ಎಂಬುವರ ಕಾಫಿ ತೋಟದಲ್ಲಿ ಸುಮಾರು 100ಕ್ಕೂ ಹೆಚ್ಚು ಕಾಫಿ ಗಿಡಗಳು, ಬಾಳೆ ಗಿಡಗಳನ್ನು ಧ್ವಂಸ ಮಾಡಿವೆ. ರತನ್ ಎಂಬುವರ ಶುಂಠಿ ಬೆಳೆಯನ್ನು ತುಳಿದು ಹಾಳು ಮಾಡಿರುವ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.
ಸುಳ್ಳಕ್ಕಿ, ಇಬ್ಬಡಿ, ಶಾಂತಪುರ, ಕುದುರಂಗಿ, ಬ್ಯಾಕರವಳ್ಳಿ, ಐಯಳ್ಳಿ ಸುತ್ತಮುತ್ತಲ ಗ್ರಾಮಗಳಿಗೆ ಒಂದು ತಿಂಗಳಲ್ಲಿ ಮೂರು ಬಾರಿ ಕಾಡಾನೆಗಳು ದಾಳಿ ನಡೆಸಿ, ಭತ್ತದ ಸಸಿ ಮಡಿ, ಕಾಫಿ, ಏಲಕ್ಕಿ, ಬಾಳೆ, ಶುಂಠಿ, ಅಡಿಕೆ, ತೆಂಗು ಬೆಳೆಗಳನ್ನು ನಾಶ ಮಾಡಿವೆ. ತೋಟದ ಬೇಲಿಗಳನ್ನು ಸಹ ತುಳಿದು ಹಾಳು ಮಾಡಿರುವುದಾಗಿ ರೈತರು ಅಳಲು ತೋಡಿಕೊಂಡಿದ್ದಾರೆ.