ಚಾಮರಾಜನಗರ: ನಗರದ ಜಿಲ್ಲಾಡಳಿತ ಭವನದ ಮುಂಭಾಗ ಮಂಗಳವಾರ ಕೂಡ ತಾಲ್ಲೂಕಿನ ಮಲೆಯೂರು ಗ್ರಾಮದ ಬಳಿ ಗಣಿಗುತ್ತಿಗೆ ನವೀಕರಣಕ್ಕೆ ಆಗ್ರಹಿಸಿ ಕಲ್ಲು ಕೆಲಸಗಾರರ ಸಹಕಾರ ಸಂಘದ ನೇತೃತ್ವದಡಿ ಕೆಲಸಗಾರರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ವಿರುದ್ಧ ಘೋಷಣೆ ಕೂಗಿದರು. ಕಳೆದ ಎರಡುವರೆ ವರ್ಷದಿಂದಲೂ ಕಲ್ಲು ಕೆಲಸ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಈಗ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಗಣಿ ಗುತ್ತಿಗೆ ನವೀಕರಿಸಿಲ್ಲ. ಇದರ ಪರಿಣಾಮ ಜೀವನ ನಡೆಸಲು ದುಸ್ತರವಾಗಿದೆ. ಕೂಡಲೇ, ನವೀಕರಣ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸಮಸ್ಯೆ ಬಗೆಹರಿಸಲು ಒತ್ತು ನೀಡಬೇಕು. ಇಲ್ಲವಾದರೆ ಹೋರಾಟ ತೀವ್ರ ಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಕಲ್ಲು ಕೆಲಸಗಾರರ ಕುಟುಂಬಗಳ ಮಕ್ಕಳು ಸಹಿತ ಸದಸ್ಯರು ಪಾಲ್ಗೊಂಡಿದ್ದರು.