ನವದೆಹಲಿ (ಪಿಟಿಐ): `ಮುಂಬೈ ದಾಳಿಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಜರುಗಿಸಬೇಕು ಎಂಬ ಭಾರತದ ಬೇಡಿಕೆಗೆ ಪಾಕಿಸ್ತಾನ ಒದಗಿಸುವ ನ್ಯಾಯ ಅವಾಸ್ತವಿಕ ಆಗಿರಬಾರದು~ ಎಂದು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಹೇಳಿದ್ದಾರೆ.
`ನಾವು ಚಂದ್ರನನ್ನು ಕೇಳುತ್ತಿಲ್ಲ. ಯಾವುದೇ ರೀತಿಯ ಅವಾಸ್ತವಿಕ ವಸ್ತುಗಳನ್ನು ಕೇಳುತ್ತಿಲ್ಲ. ಬದಲಾಗಿ ನ್ಯಾಯವನ್ನು ಕೇಳುತ್ತಿದ್ದೇವೆ~ ಎಂದು ಇಲ್ಲಿಗೆ ಭೇಟಿ ನೀಡಿರುವ ಪಾಕಿಸ್ತಾನದ ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ಅವರು ಅಭಿಪ್ರಾಯಪಟ್ಟರು.
`ಉಭಯ ದೇಶಗಳ ನಡುವಿನ ವಿದೇಶಾಂಗ ಸಚಿವರ ಮಾತುಕತೆ ಈ ತಿಂಗಳು ನಡೆಯಲಿದೆ. ಭದ್ರತೆ, ನೀರು, ವ್ಯಾಪಾರ ಹಾಗೂ ವಾಣಿಜ್ಯಕ್ಕೆ ಸಂಬಂಧಿಸಿದಂತೆ ಹಲವಾರು ಸುತ್ತುಗಳ ಚರ್ಚೆಯ ನಂತರ ಈ ಮಾತುಕತೆ ಏರ್ಪಡಿಸಲಾಗಿದೆ~ ಎಂದರು.
ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಸಲುವಾಗಿ ಪಾಕಿಸ್ತಾನದೊಂದಿಗೆ ಮಾತುಕತೆ ಪುನರಾರಂಭಿಸುವ ಧೈರ್ಯ ತೋರಿದ್ದೇವೆ. ಈ ನಿಟ್ಟಿನಲ್ಲಿ ತೆಗೆದುಕೊಂಡಿರುವ ಪ್ರತಿಯೊಂದು ಕ್ರಮವೂ ಅರ್ಥಪೂರ್ಣವಾಗಿದೆ ಎಂದ ರಾವ್, ಪಾಕಿಸ್ತಾನದಲ್ಲಿನ ಉಗ್ರರ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಭಯೋತ್ಪಾದಕರಿಂದ ಏನೆಲ್ಲ ಕೃತ್ಯಗಳು ನಡೆದಿವೆ ಎಂಬುದು ಇಸ್ಲಾಮಾಬಾದ್ಗೆ ಚೆನ್ನಾಗಿ ತಿಳಿದಿದೆ ಎಂದರು.