ಇಸ್ಲಾಮಾಬಾದ್ (ಐಎಎನ್ಎಸ್): ಮುಂಬೈ ದಾಳಿ (26/11) ಶಂಕಿತರಿಗೆ ಶಿಕ್ಷೆ ನೀಡಲು ಪಾಕಿಸ್ತಾನ ವಿಳಂಬ ನೀತಿ ಮುಂದುವರಿಸಿರುವುದು ಭಾರತಕ್ಕೆ ನಿರಾಸೆ ಉಂಟು ಮಾಡಿದೆ ಎಂದು ಪಾಕ್ನ ಪ್ರಮುಖ ದೈನಿಕವೊಂದು ವರದಿ ಮಾಡಿದೆ.
`ಉಭಯ ದೇಶಗಳ ನಡುವಿನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯಿಂದ ಏನೂ ಲಾಭವಾಗಿಲ್ಲ~ ಎಂದು `ದಿ ಡಾನ್~ ಪತ್ರಿಕೆಯ ಶನಿವಾರದ ಸಂಪಾದಕೀಯದಲ್ಲಿ ವಿಶ್ಲೇಷಿಸಲಾಗಿದೆ.
`ಪಾಕ್ ವಿದೇಶಾಂಗ ಕಾರ್ಯದರ್ಶಿ ಜಲೀಲ್ ಅಬ್ಬಾಸ್ ಜಿಲಾನಿ ಹಾಗೂ ಭಾರತದ ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್ ಅವರ ಮಧ್ಯೆ ನಡೆದ ಮಾತುಕತೆಯಲ್ಲಿ ಏನೂ ಬೆಳವಣಿಗೆ ಆಗಿಲ್ಲ. ವೀಸಾ ಸಡಿಲಿಕೆ, ಕಾಶ್ಮೀರಕ್ಕೆ ಸಾಂಸ್ಕೃತಿಕ ಸಂಪರ್ಕ ಹಾಗೂ ಪರಮಾಣು ವಿಶ್ವಾಸ ವೃದ್ಧಿ ಕ್ರಮದ ಬಗ್ಗೆ ಮಹತ್ವದ ಚರ್ಚೆ ಆಗಿಲ್ಲ~ ಎಂದು ಅದು ಹೇಳಿದೆ.
`ಜಬಿಯುದ್ದೀನ್ ಅನ್ಸಾರಿ ಬಂಧನದ ಬಳಿಕ ಕಲೆ ಹಾಕಿದ ಪುರಾವೆಗಳಿಂದ ಮುಂಬೈ ದಾಳಿಯಲ್ಲಿ ಪಾಕಿಸ್ತಾನದವರ ಕೈವಾಡ ಇದೆ ಎನ್ನುವುದು ದೃಢಪಟ್ಟಿದೆ~ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಮಾಡಿದ ಆರೋಪವನ್ನು ಜಿಲಾನಿ ನಿರಾಕರಿಸಿದ್ದರು.
`ಭಾರತವು ಮುಂಬೈ ದಾಳಿ ಕರಿನೆರಳಿನಿಂದ ಹೊರಬಂದಿಲ್ಲ. ಇದೇ ವೇಳೆ ಪಾಕಿಸ್ತಾನವು ದಾಳಿ ಶಂಕಿತರನ್ನು ಶಿಕ್ಷಿಸಲು ವಿಳಂಬ ನೀತಿ ಮುಂದುವರಿಸಿದೆ~ ಎಂದೂ ಪತ್ರಿಕೆ ತಿಳಿಸಿದೆ.