ನವದೆಹಲಿ (ಪಿಟಿಐ): ಮುಂಬೈ ಮೇಲೆ ನಡೆದ 26/11ರ ಅಮಾನುಷ ದಾಳಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪ್ರಮುಖರನ್ನು ಸಂದರ್ಶಿಸಲು ಪಾಕಿಸ್ತಾನ ರಚಿಸಿರುವ ನ್ಯಾಯಾಂಗ ಆಯೋಗಕ್ಕೆ ಫೆಬ್ರುವರಿ ಮೊದಲ ವಾರ ಭಾರತಕ್ಕೆ ಭೇಟಿ ನೀಡಲು ಬಾಂಬೆ ಹೈಕೋರ್ಟ್ ಒಪ್ಪಿಗೆ ನೀಡಿದೆ.
ಆಯೋಗದ ಭೇಟಿಗೆ ತಾತ್ವಿಕ ಒಪ್ಪಿಗೆ ನೀಡಿರುವುದಾಗಿ ಬಾಂಬೆ ಹೈಕೋರ್ಟ್ ಗೃಹ ಸಚಿವಾಲಯಕ್ಕೆ ತಿಳಿಸಿದೆ. ಗೃಹ ಸಚಿವಾಲಯವು ಸದ್ಯದಲ್ಲೇ ಈ ವಿಷಯವನ್ನು ರಾಜತಾಂತ್ರಿಜ್ಞರ ಮೂಲಕ ಪಾಕಿಸ್ತಾನಕ್ಕೆ ತಲುಪಿಸಲಿದೆ.
ಆದರೆ ಪ್ರಸ್ತುತ ಪಾಕಿಸ್ತಾನವು ರಾಜಕೀಯ ತಳಮಳದಲ್ಲಿ ಸಿಲುಕಿರುವುದರಿಂದ ಆಯೋಗವು ಯಾವಾಗ ಭೇಟಿ ನೀಡುತ್ತದೆ ಎಂಬುದನ್ನು ತಕ್ಷಣ ಹೇಳಲು ಸಾಧ್ಯವಿಲ್ಲ.
ಪ್ರಕರಣದ ವಿಚಾರಣೆ ವೇಳೆ ದಾಳಿಯ ಸಂಚುಕೋರ ಅಜ್ಮಲ್ ಕಸಾಬ್ ಹೇಳಿಕೆಯನ್ನು ದಾಖಲಿಸಿದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್.ವಿ.ಸಾವಂತ್ ವಾಘಲೆ ಮತ್ತು ತನಿಖಾಧಿಕಾರಿ ರಮೇಶ್ ಮಹಾಲೆ ಅವರನ್ನು ಪಾಕ್ ನ್ಯಾಯಾಂಗ ಆಯೋಗದ ಸದಸ್ಯರು ಭೇಟಿ ಮಾಡಲಿದ್ದಾರೆ.