ನ್ಯೂಯಾರ್ಕ್ (ಪಿಟಿಐ): ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಮಧ್ಯೆ ಮಾತುಕತೆಗೆ ವೇದಿಕೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಮುಂಬೈ ದಾಳಿ ಸಂಚುಕೋರರ ವಿರುದ್ಧ ಪಾಕ್ ಹೊಣೆಗಾರಿಕೆ ನಿಗದಿ ಮಾಡಬೇಕೆಂದು ಭಾರತ ಆಗ್ರಹಿಸಿದೆ.
‘ಉಭಯ ದೇಶಗಳ ಪ್ರಧಾನಿ ಅವರ ಮಧ್ಯೆ ಮಾತುಕತೆ ಕಾರ್ಯಸೂಚಿ ಸಿದ್ಧಪಡಿಸಲಾಗಿದ್ದು, ಇದರಲ್ಲಿ 26/11ರ ಮುಂಬೈ ಮೇಲಿನ ದಾಳಿಗೆ ಪಾಕ್ ನೆಲದಲ್ಲಿ ಸಂಚು ನಡೆಸಿ ಅದನ್ನು ಕಾರ್ಯಗತ ಮಾಡಿದವರ ವಿರುದ್ಧ ಹೊಣೆಗಾರಿಕೆ ನಿಗದಿ ಮಾಡುವಂತೆ ಕೋರಲಾಗಿದೆ’ ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಮಾತುಕತೆಯಲ್ಲಿ ಇಬ್ಬರು ಮುಖಂಡರು ಎಲ್ಲಾ ವಿಷಯ ಅಥವಾ ವಿವಾದಗಳ ಕುರಿತು ಚರ್ಚೆ ನಡೆಸುವುದಿಲ್ಲ. ಈ ಚರ್ಚೆ ಸೀಮಿತ ವಿಷಯಗಳ ಬಗ್ಗೆ ನಡೆಯುತ್ತದೆ’ ಎಂದು ಅವರು ಹೇಳಿದರು.
‘ಮುಂಬೈ ದಾಳಿ ಕುರಿತಂತೆ ಪಾಕ್ನ ನ್ಯಾಯಾಂಗ ಆಯೋಗವು ಭಾರತಕ್ಕೆ ಬಂದು ಸಾಕ್ಷಿಗಳ ವಿಚಾರಣೆ ನಡೆಸಿದೆ. ಈ ಮೂಲಕ ಭಾರತ ಸಂಗ್ರಹಿಸಿರುವ ಸಾಕ್ಷ್ಯಗಳನ್ನು ಪಾಕ್ ಕೋರ್ಟ್ ಮಾನ್ಯ ಮಾಡುವ ಸಾಧ್ಯತೆ ಇದೆ. ಇದೊಂದು ಉತ್ತಮ ಬೆಳವಣಿಗೆ’ ಎಂದು ಅವರು ನುಡಿದರು.
‘26/11ರ ದಾಳಿಯ ಸಂಚುಕೋರರನ್ನು ನ್ಯಾಯಾ ಲಯದ ಮುಂದೆ ತಂದು ನಿಲ್ಲಿಸುವಂತಹ ಪ್ರಯತ್ನ ಪಾಕ್ನಲ್ಲಿ ಈಗಷ್ಟೆ ಆರಂಭವಾಗಿದೆ. ಇದು ಪೂರ್ಣಗೊಳ್ಳಲು ಇನ್ನೂ ಅನೇಕ ಹಂತಗಳಲ್ಲಿ ಪ್ರಯತ್ನಗಳು ಸಾಗಬೇಕಿದೆ. ಪ್ರಧಾನಿ ಸಿಂಗ್ ಸಹ ಪಾಕ್ನಿಂದ ಪಸರಿಸುತ್ತಿರುವ ಭಯೋತ್ಪಾದನಾ ಚಟುವಟಿಕೆ ಬಗ್ಗೆ ಕಳವಳಗೊಂಡಿದ್ದು, ಇದನ್ನು ಮಾತುಕತೆ ಸಂದರ್ಭದಲ್ಲಿ ಪಾಕ್ ಪ್ರಧಾನಿಯವರಿಗೂ ಮನವರಿಕೆ ಮಾಡಿ ಕೊಡಲಿದ್ದಾರೆ’ ಎಂದು ಖುರ್ಷಿದ್ ಹೇಳಿದರು.
‘ಭಯೋತ್ಪಾದನೆ ಹತ್ತಿಕ್ಕಲು ಪಾಕ್ಗೆ ತೊಂದರೆ ಏನಾದರೂ ಇದ್ದರೆ ಈ ಬಗೆ್ಗ ಆ ದೇಶವು ಪಾರ ದರ್ಶಕವಾಗಿ ಮತ್ತು ಮುಕ್ತವಾಗಿ ನಮ್ಮೊಂದಿಗೆ ಮಾತನಾಡ ಬೇಕು. ಆಗಬೇಕಿದ್ದರೆ ಭಯೋತ್ಪಾದನೆ ನಿಗ್ರಹಿ ಸಲು ಜಂಟಿ ಕಾರ್ಯಾಚರಣೆ ನಡೆಸುವ ಕುರಿತು ಚರ್ಚಿಸ ಬಹುದು. ಏಕೆಂದರೆ ಭಾರತವನ್ನು ಗುರಿಯಾಗಿಟ್ಟು ಕೊಂಡು ಪಾಕ್ ನೆಲದಿಂದ ನಡೆಯುತ್ತಿರುವ ಭಯೋತ್ಪಾ ದನಾ ಚಟುವಟಿಕೆಗಳು ನಮ್ಮನ್ನು ಆತಂಕಕ್ಕೀಡು ಮಾಡಿವೆ’ ಎಂದು ಅವರು ನುಡಿದರು.
ವಿಶ್ವಸಂಸ್ಥೆ ಮಹಾಸಭೆಯಲ್ಲಿ ಭಾಗವಹಿಸಲು ಅಮೆರಿಕಗೆ ತೆರಳುವ ಮುನ್ನ ನವದೆಹಲಿಯಲ್ಲಿ ಮಾತನಾಡಿದ ಪ್ರಧಾನಿ ಸಿಂಗ್, ಪಾಕ್ ಪ್ರಧಾನಿ ಅವರನ್ನು ಭೇಟಿ ಮಾಡಲು ಉತ್ಸುಕ ವಾಗಿರುವುದಾಗಿ ಹೇಳಿದ್ದಾರೆ. ಇಂಥದ್ದೇ ಮಾತನ್ನು ಪಾಕ್ ಪ್ರಧಾನಿ ಷರೀಫ್ ಕೂಡ ಆಡಿದ್ದಾರೆ.
ಈ ಮಧ್ಯೆ, ಭಾರತ– ಪಾಕ್ ಪ್ರಧಾನಿಗಳು ಉಭಯ ದೇಶಗಳ ನಡುವಿನ ಎಲ್ಲಾ ವಿವಾದಗಳ ಕುರಿತು ಭಾನುವಾರ ಚರ್ಚಿಸಲಿದ್ದಾರೆ ಎಂದು ಪಾಕ್ನ ಉನ್ನತ ಅಧಿಕಾರಿಗಳು ಹೇಳಿದ್ದಾರೆ. ‘ಎರಡು ದೇಶಗಳ ನಡುವಿನ ಎಲ್ಲಾ ವಿವಾದಗಳು ಮಹತ್ವದ್ದೇ ಆಗಿವೆ. ಆದ್ದರಿಂದ ಈ ಕುರಿತು ಚರ್ಚೆ ನಡೆಸುವ ಅವಶ್ಯಕತೆ ಇದೆ. ಭಯೋತ್ಪಾದನೆಯು ಎರಡೂ ದೇಶಗಳ ಆತಂಕಕ್ಕೆ ಕಾರಣ ವಾಗಿದೆ. ಇದನ್ನು ನಿಗ್ರಹಿಸಲು ಉಭಯ ದೇಶಗಳು ಒಟ್ಟಾಗಿ ಶ್ರಮಿಸುವ ಅಗತ್ಯವಿದೆ’ ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಇಜಾಜ್ ಅಹ್ಮದ್ ಚೌಧರಿ ತಿಳಿಸಿದ್ದಾರೆ.
ಎಚ್ 1ಬಿ ವೀಸಾ ಮಸೂದೆ ಸುಧಾರಣೆ: ಅಮೆರಿಕಕ್ಕೆ ಮನವಿ
ಆರ್ಥಿಕ ಸುಧಾರಣಾ ಕ್ರಮವಾಗಿ ವಿದೇಶಿ ಉದ್ಯೋಗಿಗಳಿಗೆ ವೀಸಾ ಶುಲ್ಕ ಹೆಚ್ಚಿಸಲು ಅಮೆರಿಕ ಜಾರಿಗೆ ತರಲು ಉದ್ದೇಶಿಸಿರುವ ಎಚ್1ಬಿ ವೀಸಾ ಮಸೂದೆ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿ, ಇದನ್ನು ಸುಧಾರಣೆ ಮಾಡುವಂತೆ ಕೋರಿದೆ.
ಈ ಮಸೂದೆಯಲ್ಲಿ ಪ್ರಸ್ತಾವಿಸಿರುವಂತೆ ಶೇ 50 ಇಲ್ಲವೇ ಅದಕ್ಕೂ ಹೆಚ್ಚು ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಂಡಿರುವ ಕಂಪೆನಿಗಳು ಪ್ರತಿಯೊಬ್ಬ ವಿದೇಶಿ ಉದ್ಯೋಗಿಗೆ 10,000 ಡಾಲರ್ (ಅಂದಾಜು ` 6.20 ಲಕ್ಷ) ವೀಸಾ ಶುಲ್ಕವನ್ನು ತೆರಬೇಕಾಗುತ್ತದೆ. ಇದರಿಂದ ಭಾರತದ ಮಾಹಿತಿ ತಂತ್ರಜ್ಞಾನ (ಐ.ಟಿ) ಉದ್ದಿಮೆಗಳು ಆತಂಕಗೊಂಡಿವೆ.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರು ಶುಕ್ರವಾರ ಭೇಟಿಯಾಗಲಿರುವ ಹಿನ್ನೆಲೆಯಲ್ಲಿ ಎಚ್1ಬಿ ವೀಸಾ ಕುರಿತು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅಮೆರಿಕದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಜಾನ್ ಕೆರಿ ಅವರನ್ನು ಗುರುವಾರ ಭೇಟಿ ಮಾಡಿದರು.
ನಾಗರಿಕ ಉದ್ದೇಶದ ಪರಮಾಣು ಒಪ್ಪಂದ ಸೇರಿದಂತೆ ಉಭಯ ದೇಶಗಳ ಹಿತಾಸಕ್ತಿಯ ಇನ್ನಿತರ ವಿಷಯಗಳ ಬಗ್ಗೆಯೂ ಅವರು ಚರ್ಚೆ ನಡೆಸಿದರು.
ಆರ್ಥಿಕ ಸಂಬಂಧವನ್ನು ಸುಧಾರಿಸಲು ಎರಡೂ ರಾಷ್ಟ್ರಗಳು ಶ್ರಮಿಸಬೇಕಿದೆ ಎಂದು ಅವರು ಹೇಳಿದರು. ಅಮೆರಿಕ ಮತ್ತು ಭಾರತದ ಉದ್ಯಮಿಗಳು ಆರ್ಥಿಕತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.
ಪ್ಯಾಲಿಸ್ಟೈನ್, ಈಜಿಪ್ಟ್, ಲಿಬಿಯಾ ಮುಖಂಡರೊಂದಿಗೂ ಖುರ್ಷಿದ್ ಮಾತುಕತೆ ನಡೆಸಿದರು. ಜೊತೆಗೆ, ‘ಸಾರ್ಕ್’ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲೂ ಭಾಗವಹಿಸಿದ್ದರು.
‘ದೃಢತೆಯತ್ತ ಭಾರತ–ಚೀನಾ ಬಾಂಧವ್ಯ’
ವಿಶ್ವಸಂಸ್ಥೆ (ಐಎಎನ್ಎಸ್): ಚೀನಾ ಜೊತೆಗಿನ ದ್ವಿಪಕ್ಷೀಯ ಸಂಬಂಧ ಗಟ್ಟಿ ಗೊಳ್ಳುತ್ತಿದೆ. ಇದನ್ನು ಮತ್ತಷ್ಟು ಸುಧಾರಿ ಸಲು ಭಾರತವು ಎಲ್ಲ ರೀತಿಯಲ್ಲೂ ಶ್ರಮಿಸುತ್ತಿದೆ ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದರು.
ವಿಶ್ವಸಂಸ್ಥೆ ಮಹಾಸಭೆಯ ಸಂದರ್ಭ ದಲ್ಲಿ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಗುರುವಾರ ಭೇಟಿ ಮಾಡಿದರು. ‘ಭಾರತ– ಚೀನಾ ಸಂಬಂಧ ಜಾಗತಿಕವಾಗಿ ಮಹತ್ವಪೂರ್ಣವಾದುದು. ಈ ನಿಟ್ಟಿನಲ್ಲಿ ಚೀನಾ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದ್ದಾಗ ವಿಸ್ತೃತ ಚರ್ಚೆ ನಡೆದಿದೆ. ದ್ವಿಪಕ್ಷೀಯ ಸಹಕಾರ ವೃದ್ಧಿಸಲು ನಾವು ಉತ್ಸುಕರಾಗಿದ್ದೇವೆ’ ಎಂದರು.
‘ಉಭಯ ದೇಶಗಳ ಮಧ್ಯೆಯ ಭಾಂದವ್ಯ ಗಟ್ಟಿಗೊಳ್ಳುತ್ತಿದೆ. ಈ ವರ್ಷದಲ್ಲಿ ನಾವು ನಾಲ್ಕನೇ ಸಾರಿ ಪರಸ್ಪರ ಭೇಟಿಯಾಗುತ್ತಿದ್ದೇವೆ’ ಎಂದು ವಾಂಗ್ ಹೇಳಿದರು.
‘ಚೀನಾ, ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್ಗಳನ್ನು ಆರ್ಥಿಕವಾಗಿ ಪರಸ್ಪರ ಸಂಪರ್ಕಿಸುವಂತಹ ಒಂದು ನೀತಿ (ಎಕಾನಾ ಮಿಕ್ ಕಾರಿಡಾರ್) ರೂಪಿಸಲು ಮಾತುಕತೆ ಚುರುಕುಗೊಂಡಿದೆ‘ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.