ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಪತ್ರಕರ್ತ ಡೇ ಹತ್ಯೆಗೆ ಖಂಡನೆ

Last Updated 15 ಜೂನ್ 2011, 19:30 IST
ಅಕ್ಷರ ಗಾತ್ರ

ರಾಮನಗರ: ಮುಂಬೈನ `ಮಿಡ್ ಡೇ~ ಪತ್ರಿಕೆಯ ಅಪರಾಧ ವಿಭಾಗದ ತನಿಖಾ ವರದಿಗಾರ ಜ್ಯೋತಿರ್ಮಯ್ ಡೇ ಅವರನ್ನು ತೈಲ ಮಾಫಿಯಾದ ಪಾತಕಿಗಳು ಗುಂಡಿಕ್ಕೆ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ರಾಮನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಿನಿ ವಿಧಾನಸೌಧದ ಮುಂದೆ ಧರಣಿ ನಡೆಸಿತು.

ಪತ್ರಕರ್ತರ ಮೇಲೆ ಪದೇ ಪದೇ ದಾಳಿಗಳು ನಡೆಯುತ್ತಿರುವುದು ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ಶೋಭೆ ತರುವುದಿಲ್ಲ. ಇಂತಹ ಘಟನೆಗಳಿಂದ ಇಡೀ ಸಮಾಜವೇ ತಲೆ ತಗ್ಗಿಸುವಂತಹ ಸ್ಥಿತಿ ಬಂದಿದೆ ಎಂದು ಸಂಘದ ಅಧ್ಯಕ್ಷ ಎಂ.ಎಚ್.ಪ್ರಕಾಶ್ ದೂರಿದರು.

ವಿಶ್ವದ ಅಂಕಿ ಅಂಶಗಳನ್ನು ಗಮನಿಸಿದರೆ ಪ್ರತಿ ವರ್ಷ ಐದಕ್ಕಿಂತ ಹೆಚ್ಚು ಮಂದಿ ಪತ್ರಕರ್ತರು ಹತ್ಯಯಾಗುತ್ತಿರುವ 13 ರಾಷ್ಟ್ರಗಳ ಪೈಕಿ ಭಾರತ ಏಳನೇ ಸ್ಥಾನದಲ್ಲಿದೆ. ಅದರಲ್ಲಿಯೂ ದೇಶದಲ್ಲಿ ಇತ್ತೀಚೆಗೆ ನಡೆದಿರುವ ಏಳು ಪತ್ರಕರ್ತರ ಹತ್ಯೆಯಲ್ಲಿ ಆರು ಪತ್ರಕರ್ತರ ಹತ್ಯೆ ಮಾಡಿದ ಹಂತಕರ ಸುಳಿವು ಪತ್ತೆಯಾಗಿಲ್ಲ ಎಂಬುದು ಕಾನೂನು ಸುವ್ಯವಸ್ಥೆಯ ವೈಫಲ್ಯತೆಯನ್ನು ಎತ್ತಿತೋರಿಸುತ್ತದೆ ಎಂದು ಅವರು ಕಿಡಿಕಾರಿದರು.

ಇಂತಹ ಪ್ರಕರಣಗಳು ನಡೆದಾಗ ಕಾಟಾಚಾರಕ್ಕೆ ತನಿಖೆ ನಡೆಸಲಾಗುತ್ತಿದೆ. ಇದು ಮರುಕಳಿಸದಂತೆ ನೋಡಿಕೊಳ್ಳಲು ಸರ್ಕಾರಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದ ಅವರು, ಜ್ಯೋತಿರ್ಮಯಿ ಡೇ ಅವರ ಕೊಲೆಯ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದರು. ಈ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು. ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

ನಾಳೆ ಉಪನ್ಯಾಸಕರ ಸಭೆ
ರಾಮನಗರ:
ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆ ಹೊರಾಟ ಸಮಿತಿಯು ವಿವಿಧ ವಿಷಯಗಳನ್ನು ಚರ್ಚಿಸಲು ರಾಮನಗರದ ಸ್ಫೂರ್ತಿ ಭವನದಲ್ಲಿ (ಮಿನಿ ವಿಧಾನಸೌಧದ ಹಿಂಭಾಗ) ಇದೇ 17ರಂದು ಸಂಜೆ 4.30 ಗಂಟೆಗೆ ಸಭೆ ಕರೆದಿದೆ.

ವೇತನ ತಾರತಮ್ಯ ನಿವಾರಣೆ ಸಂಬಂಧ ಸಮಿತಿವತಿಯಿಂದ ನಡೆಸಿದ ಹೋರಾಟಗಳು, ಆ ನಂತರದ ಬೆಳವಣಿಗೆಗಳ ಬಗ್ಗೆ ಸಭೆ ಚರ್ಚೆ ನಡೆಯಲಿದೆ.  ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 99001- 54430 ಸಂಪರ್ಕಿಸಿ.

ನಾಳೆ ರೇಷ್ಮೆಬೆಳೆಗಾರರ ಸಭೆ
ರಾಮನಗರ: ಚೀನಾ ರೇಷ್ಮೆ ಆಮದನ್ನು ಕೈಬಿಟ್ಟು ದೇಶಿ ರೇಷ್ಮೆ ಬೆಳೆಗಾರರನ್ನು ರಕ್ಷಿಸಬೇಕು, ರೇಷ್ಮೆ ಆಮದು ಸುಂಕವನ್ನು ಶೇ 35 ಪ್ರಮಾಣಕ್ಕೆ ಏರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇದೇ 17ರಂದು ಬೆಂಗಳೂರಿನಲ್ಲಿ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಚನ್ನಪಟ್ಟಣ-ರಾಮನಗರ ರೈಲು ನಿಲ್ದಾಣದಿಂದ 17ರಂದು ಬೆಳಿಗ್ಗೆ 7 ಗಂಟೆಗೆ ರೈತರು ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ. ಬೆಂಗಳೂರು ರೈಲು ನಿಲ್ದಾಣದಿಂದ ಬೆಳಿಗ್ಗೆ 10.30ಕ್ಕೆ ಮೆರವಣಿಗೆಯಲ್ಲಿ ವಿಧಾನಸೌಧ ಸೇರುವುದಾಗಿ ಸಂಘದ ಪ್ರಕಟಣೆ ತಿಳಿಸಿದೆ.

ಕುಂದು-ಕೊರತೆ ಸಭೆ ಇಂದು
ಮಾಗಡಿ:
  ರೇಷ್ಮೆ ಹುರಿ ಕಾರ್ಖಾನೆ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗುರವಾರ  ಬೆಳಿಗ್ಗೆ 10 ಗಂಟೆಗೆ  ಸಿದ್ಧಾರೂಢ ಸ್ವಾಮಿ ಸಭಾ ಭವನದಲ್ಲಿ ಕುಂದು ಕೊರತೆ ಸಭೆ ಕರೆಯಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT