ಬೀಜಿಂಗ್ (ಪಿಟಿಐ): ಇಲ್ಲಿನ ಸ್ಥಳೀಯ ವರ್ತಕರು ಅಪಹರಿಸಿದ್ದ ಭಾರತೀಯ ವ್ಯಾಪಾರಿ ಮುಹಮದ್ ದನಿಶ್ ಖುರೇಷಿ ಅವರು ಬಿಡುಗಡೆಗೊಂಡಿದ್ದು, ಶುಕ್ರವಾರ ಮುಂಬೈಗೆ ವಾಪಸಾಗಿದ್ದಾರೆ.ಇದೇ ತಿಂಗಳ 19ರಂದು ಖುರೇಷಿ ಅವರನ್ನು ಅಪಹರಿಸಿದ್ದ ವರ್ತಕರು ಅವರನ್ನು ಹಿಂಸಿಸಿದ್ದರು ಎಂದು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿಯಲ್ಲಿ ಇದೇ ರೀತಿ ಭಾರತೀಯ ವರ್ತಕರಾದ ಶ್ಯಾಮ್ಸುಂದರ್ ಅಗರ್ವಾಲ್ ಮತ್ತು ದೀಪಕ್ ರಹೇಜಾ ಅವರನ್ನು ಬಾಕಿ ಹಣ ಪಾವತಿಸಿಲ್ಲ ಎಂದು ಆರೋಪಿಸಿ ವರ್ತಕರು ಸುಮಾರು 15 ದಿನಗಳ ಕಾಲ ಒತ್ತೆಯಲ್ಲಿ ಇಟ್ಟುಕೊಂಡಿದ್ದರು. ಬಳಿಕ ಭಾರತ ಸರ್ಕಾರದ ಮಧ್ಯಪ್ರವೇಶದಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಇದೀಗ ಖುರೇಷಿ ಅವರನ್ನು ವರ್ತಕರು ಖುದ್ದಾಗಿ ಬಿಡುಗಡೆ ಮಾಡಿರುವುದು ಅವರಿಂದ ಯಾವುದೇ ಸಾಲ ಪಾವತಿ ಬಾಕಿ ಇರಲಿಲ್ಲ ಎಂಬುದನ್ನು ತಿಳಿಸುತ್ತದೆ, ಹೀಗಾಗಿ ತಪ್ಪು ಮಾಹಿತಿಯ ಮೇರೆಗೆ ಅವರನ್ನು ಅಪಹರಿಸಿದ್ದ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.