ಇಸ್ಲಾಮಾಬಾದ್, (ಪಿಟಿಐ): ಮುಂಬೈನಲ್ಲಿ 2008 ರಲ್ಲಿ ನಡೆದ ದಾಳಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ-3ರ ಅಧಿಸೂಚನೆಯನ್ನೇ ಶನಿವಾರ ರದ್ದು ಮಾಡಿ ಆದೇಶ ಹೊರಡಿಸಿರುವ ಪಾಕಿಸ್ತಾನ ನ್ಯಾಯಾಂಗ ಇಲಾಖೆ ಅಲ್ಲಿದ್ದ ನ್ಯಾಯಾಧೀಶರನ್ನು ಬೇರೆಡೆ ವರ್ಗಾವಣೆ ಮಾಡಿದೆ.
ಇದರಿಂದಾಗಿ ಭಯೋತ್ಪಾದನಾ ಕೃತ್ಯಗಳ ವಿಚಾರಣೆಗಾಗಿಯೇ ಸ್ಥಾಪಿಸಲಾಗಿದ್ದ ವಿಶೇಷ ನ್ಯಾಯಾಲಯ ಅಸ್ತಿತ್ವ ಕಳೆದುಕೊಂಡಿದ್ದು, ಪ್ರಕರಣದ ವಿಚಾರಣೆ ನೆನೆಗುದಿಗೆ ಬಿದ್ದಂತಾಗಿದೆ.
ಇದೇ ಜುಲೈನಲ್ಲಿ ಪ್ರಕರಣದ ವಿಚಾರಣೆ ಆರಂಭಿಸಿದ್ದ ನ್ಯಾಯಾಧೀಶ ಶಹೀದ್ ರಫೀಕ್ ಅವರನ್ನು ಮರಳಿ ಗುಜ್ರನ್ವಾಲಾ ನ್ಯಾಯಾಲಯಕ್ಕೆ ವರ್ಗ ಮಾಡಲಾಗಿದೆ.
ಇದರಿಂದಾಗಿ ಸತತ ಎರಡನೇ ವಾರವೂ ವಿಚಾರಣೆ ಸ್ಥಗಿತಗೊಂಡಿದೆ. 2009ರಲ್ಲಿ ಪ್ರಕರಣದ ವಿಚಾರಣೆ ಆರಂಭವಾದ ಬಳಿಕ ಒಟ್ಟು ಐವರು ನ್ಯಾಯಾಧೀಶರನ್ನು ವರ್ಗಾವಣೆ ಮಾಡಿದಂತಾಗಿದೆ.