ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಅವಕಾಶ ಕೊಟ್ಟರೆ ಉತ್ತಮ ಆಡಳಿತ

Last Updated 12 ಜುಲೈ 2012, 5:15 IST
ಅಕ್ಷರ ಗಾತ್ರ

ರಾಮನಗರ: ಯಾವುದೇ ಪಕ್ಷದ ಹಂಗಿಲ್ಲದೆ ಅಧಿಕಾರ ನಡೆಸಲು ರಾಜ್ಯದ ಜನತೆ ಅವಕಾಶ ಮಾಡಿಕೊಟ್ಟರೆ ಸಮರ್ಥವಾಗಿ ರಾಜ್ಯವನ್ನು ಮುನ್ನಡೆಸುತ್ತೇನೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರೂ ಆದ ಸಂಸದ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ಕರಗ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಚಾಮುಂಡಿ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಡೀ ರಾಜ್ಯದಲ್ಲಿ ಬರಗಾಲ ಎದುರಾಗಿದೆ. ರೈತರು ಮತ್ತು ಪಶುಗಳಿಗೆ ಆಹಾರ, ನೀರಿಲ್ಲದ ಸ್ಥಿತಿ ಎದುರಾಗಿದೆ. ಸಾಲಮನ್ನಾ ಮಾಡುವಂತೆ ರೈತರು ಆಗ್ರಹಿಸುತ್ತಿದ್ದಾರೆ. ಆದರೆ ಈಗಿನ ಬಿಜೆಪಿ ಸರ್ಕಾರಕ್ಕೆ ಇದನ್ನ್ಲ್ಲೆಲಾ  ಕೇಳಿಸಿಕೊಂಡು ಸಮಸ್ಯೆ ಪರಿಹರಿಸಲು ಸಮಯವೇ ಇಲ್ಲವಾಗಿದೆ ಎಂದು ಅವರು ಟೀಕಿಸಿದರು.

ಆಡಳಿತಾರೂಢ ಬಿಜೆಪಿಗೆ ಬರದ ಸಮಸ್ಯೆ ಬಗೆಹರಿಸುವ ಬದಲು ತನ್ನಲ್ಲಿನ ಭಿನ್ನಾಭಿಪ್ರಾಯ ಸರಿದೂಗಿಸಿಕೊಳ್ಳಲಿಕ್ಕೇ ಸಮಯ ಇಲ್ಲವಾಗಿದೆ. ಹೀಗಿರುವಾಗ ಅವರು ಜನತೆಯ ಕಷ್ಟಕ್ಕೆ ಹೇಗೆ ಸ್ಪಂದಿಸುತ್ತಾರೆ ಎಂದು ದೂರಿದರು.

ರಾಜ್ಯದಲ್ಲಿ ಬಿಜೆಪಿ ಆಡಳಿತ ನಗೆಪಾಟಲಿಗೆ ಈಡಾಗಿದೆ. ಅಧಿಕಾರ ದಾಹವೇ ತುಂಬಿ ತುಳುಕುತ್ತಿರುವ ಈ ಬಿಜೆಪಿ ಪಕ್ಷದ ಜತೆಗೂಡಿ 20 ತಿಂಗಳು ನಾನು ಹೇಗೆ ಆಡಳಿತ ನಡೆಸಿದ್ದೇನೆ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು.

ಇವರ ಅಧಿಕಾರ ಲಾಲಸೆಯ ನಡುವೆಯೂ ಸಮರ್ಥವಾಗಿ ರಾಜ್ಯವನ್ನು ಮುನ್ನಡೆಸಿ, ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಯಾವುದೇ ಪಕ್ಷದ ಹಂಗಿಲ್ಲದಂತೆ ಜನತೆ ಈ ಬಾರಿ ಆಶೀರ್ವಾದ ಮಾಡಿದರೆ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಒಯ್ಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಜಾತಿ ರಾಜಕಾರಣವನ್ನು ಯಾವುದೇ ಪಕ್ಷ ಮಾಡಬಾರದು. ಬಿಜೆಪಿ ಇದನ್ನು ಮಾಡಿ ಇಡೀ ರಾಜಕಾರಣಕ್ಕೆ ಕಳಂಕ ತಂದಿದೆ ಎಂದು ಅವರು ವಿಷಾದಿಸಿದರು.

ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನನ್ನ 20 ತಿಂಗಳ ಆಡಳಿತವನ್ನು ಅಲ್ಲಿನ ಜನತೆ ಇಷ್ಟಪಟ್ಟಿದ್ದಾರೆ. ಅಲ್ಲಿಗೆ ಪ್ರವಾಸ ಹೋದ ಸಂದರ್ಭದಲ್ಲಿ ಇದು ಮನವರಿಕೆಯಾಗಿದೆ ಎಂದು ಅವರು ಹೇಳಿದರು.

ಈಗಿನ ಸರ್ಕಾರದ ಸ್ಥಿತಿಯನ್ನು ನೋಡಿದರೆ ಯಾವಾಗ ಬೇಕಾದರೂ ಚುನಾವಣೆ ಎದುರಾಗಬಹುದು. ಅದನ್ನು ಎದುರಿಸಲು ಜೆಡಿಎಸ್ ಸಿದ್ಧವಾಗಿದೆ. ಈ ಬಾರಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧಿಸುತ್ತದೆ ಎಂದು ಅವರು ಘೋಷಿಸಿದರು.

ಶಾಸಕರಾದ ಅನಿತಾ ಕುಮಾರಸ್ವಾಮಿ, ಕೆ.ರಾಜು, ಎಚ್.ಸಿ.ಬಾಲಕೃಷ್ಣ, ಅಫ್ಸರ್ ಆಗಾ, ನಟ ಶ್ರೀನಗರ ಕಿಟ್ಟಿ, ನಗರಸಭೆ ಅಧ್ಯಕ್ಷ ಸಾಬಾನ್ ಸಾಬ್, ಮುಖಂಡರಾದ ಕೂಟಗಲ್ ದೇವೇಗೌಡ, ರಾಜಶೇಖರ್, ಬಿ.ಉಮೇಶ್, ಮುಕುಂದ್‌ರಾಜ್, ಚಿಕ್ಕವೀರೇಗೌಡ, ಸೋಮಶೇಖರ್ ಮೊದಲಾದವರು ಉಪಸ್ಥಿತರ್ದ್ದಿದರು.

ವಿಜೃಂಭಣೆಯ ಕರಗ

ರಾಮನಗರ: ರಾಮನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ಅಮ್ಮನವರ ಕರಗ ಮಂಗಳವಾರ ಮತ್ತು ಬುಧವಾರ ವಿಜೃಂಭಣೆಯಿಂದ ನೆರವೇರಿತು. ನಗರ ಹಾಗೂ ವಿವಿಧ ಭಾಗಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಕರಗದ ದರ್ಶನ ಪಡೆದು ಪುನೀತರಾದರು. ಸಿಂಗ್ರಾಭೋವಿ ದೊಡ್ಡಿಯಿಂದ ಚಾಮುಂಡೇಶ್ವರಿ ಕರಗಕ್ಕೆ ಮಂಗಳವಾರ ರಾತ್ರಿ ಚಾಲನೆ ದೊರೆಯಿತು. ಅಲ್ಲಿಂದ ನಗರದ ಬಡಾವಣೆಗಳು ಮತ್ತು ಮುಖ್ಯ ರಸ್ತೆಗಳಲ್ಲಿ ಸಾಗಿ, ಬುಧವಾರ ಬೆಳಿಗ್ಗೆ ಅಗ್ನಿಕೊಂಡ ಪ್ರವೇಶ ಮಾಡುವ ಮೂಲಕ ಕರಗ ದೇವಾಲಯ ಸೇರಿತು.

ಐದು ವರ್ಷಗಳಿಂದ ಕರಗಧಾರಣೆ ಮಾಡಿರುವ ದೇವಿ ಪ್ರಸಾದ್ ಸಿಂಗ್ ಅವರೇ ಈ ಬಾರಿಯೂ ಕರಗ ಧರಿಸಿದ್ದರು. ಕರಗ ಸಾಗುವ ದಾರಿಯನ್ನು ನೀರಿನಿಂದ ಶುಚಿಗೊಳಿಸಲಾಗಿತ್ತು. ರಸ್ತೆಯಲ್ಲಿ ರಂಗೋಲಿಗಳನ್ನು ಬಿಡಿಸಿ ಸ್ವಾಗತ ಕೋರಲಾಗಿತ್ತು. ಕರಗ ಸಾಗಿದ ಹಾದಿಯಲ್ಲಿ ಭಕ್ತರು ಪೂಜಿಸಿ ನಮನ ಸಲ್ಲಿಸಿದರು.

ಕರಗದ ಪ್ರಯುಕ್ತ ನಗರದಲ್ಲಿ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆದವು. ಚಾಮುಂಡಿ ದೇವಿಯನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಿ ಸಿಂಗರಿಸಲಾಗಿತ್ತು.
 
ಪೂರಕವಾಗಿ ನಗರದ ಬಹುತೇಕ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನಗರದ ವಿವಿಧೆಡೆ ನಿರ್ಮಿಸಲಾಗಿದ್ದ ಬೃಹತ್ ಸ್ವಾಗತ ಕಮಾನುಗಳು ಕರಗ ಮಹೋತ್ಸವಕ್ಕೆ ಆಗಮಿಸುವವರಿಗೆ ಸ್ವಾಗತ ಕೋರುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT