ಬೆಂಗಳೂರು: `ಮುಕ್ತ ವಿಶ್ವವಿದ್ಯಾಲಯವು ಇಂದು ಶಿಕ್ಷಣದಲ್ಲಿ ಶ್ಲಾಘನೀಯ ಪಾತ್ರವನ್ನು ವಹಿಸುತ್ತಿದೆ. ಉನ್ನತ ಶಿಕ್ಷಣವನ್ನು ಎಲ್ಲರಿಗೂ ತಲುಪಿಸುವ ಕಾರ್ಯ ಮಾಡುತ್ತಿದೆ~ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎನ್.ಎಸ್.ರಾಮೇಗೌಡ ಹೇಳಿದರು.
ಎನ್ಎಂಕೆಆರ್ವಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ನಡೆದ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `1997ರವರೆಗೆ ಪದವಿ ಕಾಲೇಜುಗಳ ಶಿಕ್ಷಣ ಮಟ್ಟ ಸಾಧಾರಣವಾಗಿತ್ತು. ಏಕೆಂದರೆ, ಸಾಮಾನ್ಯವಾಗಿ ಆಗ ಎಲ್ಲ ಕಾಲೇಜುಗಳು ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಟ್ಟಿದ್ದವು.
ಇದರಿಂದ ಪಠ್ಯಕ್ರಮಗಳ ಬದಲಾವಣೆ ಮಾಡುವಂತಿರಲಿಲ್ಲ. ಹೊಸತನವನ್ನು ಕಾಣುವಂತಿರಲಿಲ್ಲ. ನಂತರ ಖಾಸಗಿ ಕಾಲೇಜುಗಳಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸ್ವಾಯತ್ತೆ ನೀಡಲಾಯಿತು. ಆಗ ಪಠ್ಯಕ್ರಮದಲ್ಲಿ ಬದಲಾವಣೆ ಮತ್ತು ಹೊಸತನವನ್ನು ತರಲು ಸಾಧ್ಯವಾಯಿತು~ ಎಂದರು.
`ವಿದ್ಯಾರ್ಥಿಗಳು ಪದವಿ ಆಯ್ಕೆ ಮಾಡಿಕೊಳ್ಳುವಾಗ ಅವರ ಆಸಕ್ತಿಯಿರುವ ವಿಷಯವನ್ನು ಆರಿಸಿಕೊಳ್ಳಬೇಕು. ಇದರಿಂದ ಅವರ ಭವಿಷ್ಯ ಉಜ್ವಲವಾಗುತ್ತದೆ~ ಎಂದು ಅವರು ಸಲಹೆ ಮಾಡಿದರು.
ಘಟಿಕೋತ್ಸವದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ 482 ವಿದ್ಯಾರ್ಥಿಗಳು ಪರಸ್ಪರ ಸಂತಸ ಹಂಚಿಕೊಂಡರು.