ಮಾಗಡಿ: ಪಟ್ಟಣದ ಗೌರಮ್ಮನ ಕೆರೆ ಕೋಡಿ ಬಳಿಯಿಂದ ಕೆಂಪೇಗೌಡ ವೃತ್ತದವರೆಗಿನ ರಸ್ತೆಯನ್ನು 66 ಅಡಿ ಯಷ್ಟು ವಿಸ್ತರಣೆಗೊಳಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ನೀಡಬೇಕೆಂದು ಶಾಸಕ ಎಚ್.ಸಿ.ಬಾಲಕೃಷ್ಣ ಮನವಿ ಮಾಡಿದರು.
ಅವರು ಪಟ್ಟಣದ ರಾಮಮಂದಿರದಲ್ಲಿ ಸೋಮವಾರ ನಡೆದ ಬ್ರಾಹ್ಮಣರ ಪ್ರಸನ್ನ ಸೀತಾರಾಮ ಸೇವಾ ಸಂಘದ ಸಭೆಯಲ್ಲಿ ಮಾತನಾಡಿದರು. ಪಟ್ಟಣದ ಅಭಿವೃದ್ಧಿಗಾಗಿ ಈ ಕಾರ್ಯ ಕೈಗೊಳ್ಳಲಾಗುತ್ತಿದೆ. ಪಟ್ಟಣ ಅಭಿವೃದ್ಧಿಯಾಗಬೇಕಾದರೆ ನಾವೆಲ್ಲರೂ ಅಲ್ಪಸ್ವಲ್ಪ ಸಂಕಟಗಳನ್ನು ಸಹಿಸಿಕೊಳ್ಳಬೇಕಿದೆ. ಉತ್ತಮ ಕೆಲಸ ಮಾಡಿದಾಗ ಬೆನ್ನು ತಟ್ಟಿ, ತಪ್ಪಿ ನಡೆದರೆ ಎಚ್ಚರಿಸಲು ಎಲ್ಲರೂ ಮುಂದಾಗಬೇಕು ಎಂದರು.
ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಮಾಡಿದ, ಮನವಿಯಂತೆ ರಾಮಮಂದಿರದ ಮುಂಭಾಗವನ್ನು ಒಡೆದು ಎರಡನೇ ಬಾಗಿಲನ್ನು ಉಳಿಸಿಕೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು. ಬ್ರಾಹ್ಮಣ ಸಂಘದ ಅಧ್ಯಕ್ಷ ಎಸ್.ಎಲ್.ಎನ್.ಪ್ರಸಾದ್, ಹಿರಿಯ ವಕೀಲ ಟಿ.ಕೆ.ಹಿರಿಯಣ್ಣ, ಜಿ.ಎಸ್.ಯೋಗಾನಂದ್, ಕರ್ಲಮಂಗಲ ಮೋಹನ್, ಗೋಪಾಲ್ದೀಕ್ಷಿತ್, ಲೇಖಕ ಪಾಣ್ಯಂ ನಟರಾಜ್, ಅಡಿಗೆ ಮಂಜುನಾಥ್, ವಸಂತಕೃಷ್ಣ, ಅಡುಗೆ ಮಂಜುನಾಥ್, ಪುರಸಭಾಧ್ಯಕ್ಷ ನರಸೇಗೌಡ, ಬಸವರಾಜ್ ಈಡಿಗ ಉಪಸ್ಥಿತರಿದ್ದರು. ಪುರಸಭಾ ಸದಸ್ಯರು, ಜಿ.ಪಂ ಸದಸ್ಯರು ಶಾಸಕರೊಂದಿಗೆ ಚರ್ಚಿಸಿದರು.
ಮನವಿ: ಗೌರಮ್ಮನಕೆರೆ ಕೋಡಿಯಿಂದ ಕೆಂಪೇಗೌಡ ವೃತ್ತದವರೆಗೆ ರಸ್ತೆಯ ಎರಡೂ ಬದಿಯಲ್ಲಿರುವ ನಿವಾಸಿಗಳಾದ ಎಚ್.ಶಿವಕುಮಾರ್, ಹೂವಿನ ಅಂಗಡಿ ನಾಗರಾಜು, ಶಂಕರ್ ಮೆಡಿಕಲ್ಸ್ನ ಎಂ.ಆರ್.ಜಗನ್ನಾಥ್ ಹಾಗೂ ನಿವಾಸಿಗಳೆಲ್ಲರೂ ಶಾಸಕರಲ್ಲಿ ಮನವಿ ಮಾಡಿ ರಸ್ತೆಯನ್ನು ಹೆಚ್ಚು ವಿಸ್ತರಿಸಿದೇ, ನಮ್ಮ ಮನೆಗಳನ್ನು ರಕ್ಷಿಸುವಂತೆ ಮನವಿ ಮಾಡಿದರು.