೧೯೮೩ರ ಕಾಯ್ದೆಯಲ್ಲಿ ರೂಪುಗೊಂಡ ಜಿಲ್ಲಾ ಪರಿಷತ್ನ ಮುಖ್ಯಾಧಿಕಾರಿಗೆ ಮುಖ್ಯಕಾರ್ಯದರ್ಶಿ ಎಂದು ಹೆಸರಿತ್ತು. ಇದಕ್ಕೆ ಒಂದು ಹಂತದಲ್ಲಿ ಅಧಿಕಾರಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತಂತೆ. ಅಧಿಕಾರಿಗಳ ಪ್ರಕಾರ ಮುಖ್ಯಕಾರ್ಯದರ್ಶಿ ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳ ಮುಖ್ಯಸ್ಥ. ಅತ್ಯಂತ ಹಿರಿಯ ಐಎಎಸ್ ಅಧಿಕಾರಿಯನ್ನು ಈ ಹುದ್ದೆಗೆ ನೇಮಿಸಲಾಗುತ್ತದೆ. ಜಿಲ್ಲಾ ಮಟ್ಟದ ಹುದ್ದೆಯೊಂದಕ್ಕೆ ಇದೇ ಪದನಾಮವಿದ್ದರೆ ಅದು ರಾಜ್ಯಮಟ್ಟದ ಹುದ್ದೆಯ ಘನತೆಯನ್ನು ಕುಗ್ಗಿಸುತ್ತದೆ ಎಂಬ ವಾದವನ್ನು ಕೆಲ ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿ ಹೆಗಡೆ ಮುಂದಿರಿಸಿದರು. ಅದಕ್ಕೆ ಅವರು ‘‘ಸರಿ ಹಾಗಾದರೆ ಜಿಲ್ಲಾ ಪರಿಷತ್ ಅಧ್ಯಕ್ಷರನ್ನು ಜಿಲ್ಲಾ ಮುಖ್ಯ ಮಂತ್ರಿಗಳೆಂದು ಪುನರ್ ನಾಮಕರಣ ಮಾಡೋಣ. ಜಿಲ್ಲಾ ಮಟ್ಟದಲ್ಲಿ ಒಬ್ಬ ಮುಖ್ಯಮಂತ್ರಿ ಇದ್ದಾರೆ ಎಂಬುದು ರಾಜ್ಯದ ಮುಖ್ಯಮಂತ್ರಿಯಾದ ನನ್ನನ್ನು ಬಾಧಿಸುವುದಿಲ್ಲ. ಅಂದ ಮೇಲೆ ಜಿಲ್ಲಾ ಮಟ್ಟದಲ್ಲಿ ಮುಖ್ಯ ಕಾರ್ಯದರ್ಶಿ ಇದ್ದರೆ ನೀವದಕ್ಕೆ ತಲೆ ಕೆಡಿಸಿಕೊಳ್ಳಬಾರದು’’ ಅಧಿಕಾರಿಗಳು ಮರುಮಾತನಾಡಲಿಲ್ಲ.
(ಪಂಚಾಯತ್ ರಾಜ್ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಜಾರ್ಜ್ ಮಾಥ್ಯೂ ತಮ್ಮ ಪುಸ್ತಕಗಳಲ್ಲಿ ಈ ಕುರಿತು ಬರೆದಿದ್ದಾರೆ)
ಜಿಲ್ಲಾ ಮಟ್ಟದಲ್ಲಿ ಮುಖ್ಯಕಾರ್ಯದರ್ಶಿಯ ಹುದ್ದೆ ಹಲವು ತಮಾಷೆಯ ಪ್ರಸಂಗಗಳಿಗೆ ಕಾರಣವಾಯಿತು.
ನಿವೃತ್ತ ಐಎಎಸ್ ಅಧಿಕಾರಿ ಬಿ. ಪಾರ್ಥಸಾರಥಿ ತಮ್ಮ ಪುಸ್ತಕ (ಆಡಳಿತದ ನೆನಪುಗಳು)ದಲ್ಲಿ ಅವರು ಹಾಸನದ ಜಿಲ್ಲಾಪರಿಷತ್ ಮುಖ್ಯ ಕಾರ್ಯದರ್ಶಿಯಾಗಿದ್ದಾಗ ನಡೆದ ಒಂದು ಘಟನೆಯನ್ನು ಹೀಗೆ ಮೆಲುಕು ಹಾಕುತ್ತಾರೆ (ಪುಟ ೧೨೬).
“ನಾನು ಬೆಂಗಳೂರಿನಲ್ಲಿ ಸಚಿವಾಲಯಕ್ಕೆ ಒಮ್ಮೆ ಹೋದಾಗ ಬಹುಮಹಡಿ ಕಟ್ಟಡದಲ್ಲಿ ದ್ವಾರಪಾಲಕ ತಡೆದು ನನ್ನ ಮತ್ತು ನನ್ನ ಜತೆಗಿದ್ದ ಮಿತ್ರರ ಗುರುತನ್ನು ಕೇಳಿದ. ಅದಕ್ಕೆ ನಾವು ಮುಖ್ಯಕಾರ್ಯದರ್ಶಿಗಳು ಎಂದು ಹೇಳಿದಾಗ ಅವನ ಪ್ರತಿಕ್ರಿಯೆ ಸ್ವಾಭಾವಿಕವಾಗಿತ್ತು. ಮುಖ್ಯಕಾರ್ಯದರ್ಶಿಗಳು ವಿಧಾನಸೌಧದಲ್ಲಿ ಇರುತ್ತಾರೆ. ಆದ್ದರಿಂದ ನಿಮ್ಮನ್ನು ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿದ. ಅಷ್ಟರಲ್ಲಿ ಅಲ್ಲಿಗೆ ಬಂದ ಸಚಿವಾಲಯದ ಅಧಿಕಾರಿಗಳು ನಿಜಸ್ಥಿತಿ ಹೇಳಿ ನಾವು ಒಳಗೆ ಹೋಗಲು ಅನುಮತಿ ನೀಡಿದರು”.
ಆಂಧ್ರಪ್ರದೇಶದ ನಿವೃತ್ತ ವಿಶೇಷ ಮುಖ್ಯಕಾರ್ಯದರ್ಶಿ ಎಸ್. ಭಲೇರಾವ್ ತಮ್ಮ ಗಮನಕ್ಕೆ ಬಂದಿದ್ದ ಇನ್ನೊಂದು ಪ್ರಸಂಗದ ಬಗ್ಗೆ ಹೇಳಿದರು. ಒಮ್ಮೆ ಕರ್ನಾಟಕದ ಜಿಲ್ಲಾ ಪರಿಷತ್ ಮುಖ್ಯಕಾರ್ಯದರ್ಶಿಯೊಬ್ಬರು ತಮಿಳುನಾಡಿಗೆ ಕೆಲಸದ ನಿಮಿತ್ತ ಹೋಗುವವರಿದ್ದರು. ತಮಿಳುನಾಡಿನಲ್ಲಿ ತಮಗೆ ಸೂಕ್ತವಾದ ಅನುಕೂಲಗಳನ್ನು ಒದಗಿಸಬೇಕು ಎಂದು ಅಲ್ಲಿನ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದರು. ಆ ಪತ್ರವನ್ನು ಓದಿದದವರು ಜಿಲ್ಲಾಪರಿಷತ್ ಎಂದು ಬರೆದದ್ದನ್ನು ಗಮನಿಸದೆ ಕೇವಲ ಮುಖ್ಯಕಾರ್ಯದರ್ಶಿ ಎನ್ನುವುದಷ್ಟನ್ನೇ ಓದಿಕೊಂಡು ಕರ್ನಾಟಕದ ಮುಖ್ಯಕಾರ್ಯದರ್ಶಿಯವರು ಬರುತ್ತಾರೆ; ಸೂಕ್ತ ಏರ್ಪಾಡು ಮಾಡತಕ್ಕದ್ದು ಎಂದು ನಮೂದಿಸಿ ಸಂಬಂಧಿಸಿದವರಿಗೆ ಕಳುಹಿಸಿದರು.
ಮುಖ್ಯಕಾರ್ಯದರ್ಶಿ ಯವರನ್ನು ಪ್ರೋಟೋಕಾಲ್ ಪ್ರಕಾರ ಸ್ವಾಗತಿಸಲು ಎಲ್ಲಾ ಸಿದ್ದತೆ ಮಾಡಿಕೊಂಡು ಕಾಯುತಿದ್ದ ಅಲ್ಲಿನ ಅಧಿಕಾರಿಗಳಿಗೆ ಕರ್ನಾಟಕದ ಅಧಿಕಾರಿ ಅಲ್ಲಿ ತಲುಪುತ್ತಲೇ ಇದೇನು ಇಷ್ಟು ಎಳೆಯ ಪ್ರಾಯದ ಅಧಿಕಾರಿ ಕರ್ನಾಟಕದಲ್ಲಿ ಮುಖ್ಯಕಾರ್ಯದರ್ಶಿಯಾಗಿದ್ದಾರೆ ಎನ್ನುವ ಸಂದೇಹ ಕಾಡಿತು. ಮತ್ತೆ ವಿಚಾರಿಸಿದಾಗ ವಿಷಯ ತಿಳಿದು ಎರಡೂ ಕಡೆಯವರು ಪೆಚ್ಚಾದರಂತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.