ಬೆಂಗಳೂರು: ‘ಬಿಜೆಪಿ ಸರ್ಕಾರದಲ್ಲಿ ಸಚಿವರೊಬ್ಬರು ವಿಧಾನಸೌಧದ ಕೊಠಡಿಯ ಗೋಡೆ ಒಡೆದಾಗ ಹಾರಾಡಿದ್ದ ಆಗಿನ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈಗೇಕೆ ಮೌನ ತಳೆದಿದ್ದಾರೆ? ಅವರೇ ಸಚಿವ ಆಂಜನೇಯಗೆ ಹೇಳಿ ಗೋಡೆ ಒಡೆಸುತ್ತಿದ್ದಾರೆಯೇ?’
ಈ ಪ್ರಶ್ನೆ ಹಾಕಿದ್ದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಡಿ.ವಿ.ಸದಾನಂದಗೌಡ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ತಕ್ಷಣ ಹಿಂದಿನ ಘಟನೆಗಳನ್ನು ಮರೆತಂತಿದೆ. ಪ್ರತಿಪಕ್ಷ ನಾಯಕರಾಗಿದ್ದಾಗ ವಿಧಾನಸಭೆಯಲ್ಲಿ ಈ ಕುರಿತು ಮಾತನಾಡಿದ್ದನ್ನು ಒಮ್ಮೆ ನೆನಪು ಮಾಡಿಕೊಳ್ಳಲಿ’ ಎಂದು ತಿರುಗೇಟು ನೀಡಿದರು.
‘ಮುಖ್ಯಮಂತ್ರಿಯವರ ಮಾತು ಮತ್ತು ಕೃತಿಗೆ ಸಂಬಂಧ ಇಲ್ಲದಂತಾಗಿದೆ. ಒಮ್ಮೆ ಹೇಳಿದ್ದನ್ನು ಮತ್ತೆ ವಾಪಸ್ ಪಡೆದು ಮತ್ತೇನನ್ನೊ ಹೇಳುವುದರ ಮೂಲಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
ಅಡಿಕೆಗೆ ಸ್ಪಷ್ಟನೆ ನೀಡಲಿ: ಅಡಿಕೆ ನಿಷೇಧಿಸುವಂತಹ ತೀರ್ಮಾನವನ್ನು ಕೇಂದ್ರ ತೆಗೆದುಕೊಂಡಿಲ್ಲ ಎಂದು ಹೇಳುವ ಮುಖ್ಯಮಂತ್ರಿ, ಸುಪ್ರೀಂ ಕೋರ್ಟ್ಗೆ ಕೇಂದ್ರ ಸಲ್ಲಿಸಿರುವ ಹೇಳಿಕೆಯಲ್ಲಿ ಏನಿದೆ ಎಂಬುದನ್ನು ಒಮ್ಮೆ ನೋಡಲಿ. ಅಡಿಕೆ ಆರೋಗ್ಯಕ್ಕೆ ಹಾನಿಕರ ಎನ್ನುವ ಹೇಳಿಕೆಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವುದಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಹೇಳಿದ್ದಾರೆ. ಇವರ ಹೇಳಿಕೆಗೂ ಸಿಎಂ ಹೇಳಿಕೆಗೂ ವ್ಯತ್ಯಾಸ ಇದೆ. ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಪಡಿಸಿದರು.