ಕೂಡಲಸಂಗಮ: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ವತಿಯಿಂದ 4ನೇ ಬಸವ ಪಂಚಮಿಯ ಅಂಗವಾಗಿ ಬಸವ ಜಯಂತಿ ಆಚರಣೆಯ ಶತಮಾನೋತ್ಸವ ಹಾಗೂ ಸರ್. ಸಿದ್ದಪ್ಪ ಕಂಬಳಿಯವರ 131ನೇ ಜಯಂತು್ಯತ್ಸವ, ಒಂದು ನೂರು ಕಾಯಕ ಸಮಾಜಗಳಿಗೆ ಗೌರವಾರ್ಪಣೆ ಸಮಾರಂಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ರಾಷ್ಟ್ರೀಯ ಪಂಚಮಸಾಲಿ ಘಟಕದ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಮನವಿ ಪತ್ರವನ್ನು ಕೊಟ್ಟರು.
ಮನವಿ ಪತ್ರದಲ್ಲಿರುವ ಅಂಶಗಳನ್ನು ನೀಲಕಂಠ ಅಸೂಟಿ ಹೇಳಿದರು. ಆ ಅಂಶಗಳು ಈ ರೀತಿ ಇವೆ. ಈ ದೇಶದಲ್ಲಿ ಒಂದು ಕೋಟಿಗೂ ಅಧಿಕವಿರುವ ಕೃಷಿ ಆಧಾರಿತ ಪಂಚಮಸಾಲಿ ಸಮಾಜದ ಶೈಕ್ಷಣಿಕ ಪ್ರಗತಿಗಾಗಿ ಈ ಸಮಾಜವನ್ನು ಪ್ರವರ್ಗ 2ಎ ಮೀಸಲಾತಿಯಲ್ಲಿ ಸೇರಿಸಬೇಕು; ಸಾಮಾಜಿಕ ನ್ಯಾಯದ ಹರಿಕಾರ ಸರ್ ಸಿದ್ದಪ್ಪ ಕಂಬಳಿಯವರ ಹೆಸರನ್ನು ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕು; ಪ್ರತಿವರ್ಷ ಸರ್ಕಾರ ಆಚರಿಸುವ ಬಸವ ಜಯಂತಿಯನ್ನು ‘ರೈತರ ದಿನ’ ವನ್ನಾಗಿ ಆಚರಿಸಲು ಘೋಷಣೆ ಮಾಡಬೇಕು; ಬೆಳಗಾವಿ ಸುವರ್ಣ ವಿಧಾನ ಸೌಧದ ಮುಂಬಾಗದಲ್ಲಿ ವೀರಮಾತೆ ಕಿತ್ತೂರು ಚೆನ್ನಮ್ಮ ಮತ್ತು ಅವರ ಬಲಗೈ ಬಂಟ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು;
ಕೂಡಲಸಂಗಮ ಗ್ರಾಮದ ಜನರ ಪುನರ್ವಸತಿಗಾಗಿ ಪುನರ್ವ್ಯವಸ್ಥೆ ಕಲ್ಪಿಸಬೇಕು; ಕೂಡಲಸಂಗಮ ಮತ್ತು ಕಲ್ಯಾಣ ಕರ್ನಾಟಕವನ್ನು ಸೇರಿಸುವ ಅಡವಿಹಾಳ ಸೇತುವೆ / ಬ್ಯಾರೇಜನು್ನು ನಿರ್ಮಿಸುವ ಘೋಷಣೆ ಮಾಡಿ ತಕ್ಷಣವೇ ಕಾಮಗಾರಿ ಪ್ರಾರಂಭಿಸಬೇಕು; ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ರೈತರ ಜೀವನದಿಗಳಾದ ಕೃಷ್ಣೆ, ಮಲಪ್ರಭಾ, ಭೀಮಾ ಮತ್ತು ಘಟಪ್ರಭಾ ನದಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳನ್ನು ಸಮಗ್ರ ನೀರಾವರಿ ಯೋಜನೆಗೆ ಜಾರಿ ತರಬೇಕು; ಕೂಡಲಸಂಗಮಕ್ಕೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಬಿಜಾಪುರ, ಆಲಮಟ್ಟಿ, ಇಲಕಲ್ ಮತ್ತು ಕೊಪ್ಪಳ ರೈಲು ಮಾರ್ಗವನ್ನು ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು; ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ ಕೂಡಲಸಂಗಮದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು; ಮುಂಬರುವ ಲೋಕಸಭೆ ಚುನಾವಣೆಗಳಲ್ಲಿ ಮತ್ತು ನಿಗಮ ಮಂಡಳಿ ಅಧ್ಯಕ್ಷರ ನಾಮನಿರ್ದೇಶನಗಳಲ್ಲಿ ನಮ್ಮ ಸಮಾಜಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.