ಚಾಮರಾಜನಗರ: ಮಾಜಿ ಮುಖ್ಯಮಂತ್ರಿ ದಿ.ಕೆಂಗಲ್ ಹನುಮಂತಯ್ಯ ನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಂಗಳಾರತಿ ಪಡೆಯದೆ ಹಿಂದಿರುಗಿದ ಸ್ವಾರಸ್ಯಕರ ಪ್ರಸಂಗ ಹೇಳಿದ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ, ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
ಒಮ್ಮೆ ಚಾಮರಾಜೇಶ್ವರ ದೇಗುಲಕ್ಕೆ ಕೆಂಗಲ್ ಹನುಮಂತಯ್ಯ ಭೇಟಿ ನೀಡಿದ್ದರು. ಅಂದು ವಿಶೇಷ ಪೂಜೆಗೆ ವ್ಯವಸ್ಥೆ ಮಾಡಲಾಯಿತು. ಮೊದಲು ಮುಖ್ಯಮಂತ್ರಿಗೆ ಮಂಗಳಾರತಿ ಸ್ವೀಕರಿಸಲು ಅರ್ಚಕರು ತಟ್ಟೆಹಿಡಿದು ಬರುತ್ತಾರೆಂದು ನಿರೀಕ್ಷಿಸಲಾಯಿತು.
ಆದರೆ, ಅರ್ಚಕರು ತಹಶೀಲ್ದಾರ್, ಕಂದಾಯ ಅಧಿಕಾರಿಗಳು ಸೇರಿದಂತೆ ದೇವಸ್ಥಾನದ ಉಸ್ತುವಾರಿ ಅಧಿಕಾರಿಗಳಿಗೆ ಮಂಗಳಾರತಿ ಸೇವೆ ನೀಡಿದರು.
ಕೊನೆಗೆ, ಹನುಮಂತಯ್ಯ ಅವರ ಬಳಿಗೆ ಬಂದರು. ಇದು ಮುಖ್ಯಮಂತ್ರಿಗೆ ಕೋಪ ತರಿಸಿತು. ಅವರು ಮಂಗಳಾರತಿ ಸ್ವೀಕರಿಸದೆ ನೇರವಾಗಿ ಸ್ನೇಹಿತರೊಬ್ಬರ ಮನೆಗೆ ತೆರಳಿದರು. ಅರ್ಚಕರ ವರ್ತನೆಗೆ ಕಿಡಿಕಾರಿದರು. ಅವರ ವಿರುದ್ಧ ಶಿಸ್ತುಕ್ರಮಕ್ಕೆ ಆದೇಶಿಸಿದರು. ಈ ಸುದ್ದಿ ಅರ್ಚಕರ ಕಿವಿಗೂ ಮುಟ್ಟಿತು.
ಆಗ ಮುಖ್ಯಮಂತ್ರಿ ಅವರು ವಾಸ್ತವ್ಯ ಹೂಡಿದ್ದ ಮನೆಗೆ ಹೋದ ಅರ್ಚಕರು ರಾಜ್ಯ ಸರ್ಕಾರ ರೂಪಿಸಿದ್ದ ಪೂಜಾ ಶಿಷ್ಟಾಚಾರದ ಪಟ್ಟಿ ತೋರಿಸಿದರು. ಅದರನ್ವಯವೇ ಅಧಿಕಾರಿಗಳಿಗೆ ಮೊದಲು ಮಂಗಳಾರತಿ ಸೇವೆ ಸ್ವೀಕರಿಸಲು ಅನುವು ಮಾಡಿಕೊಡಲಾಗಿದೆ. ಈ ಪಟ್ಟಿಯಲ್ಲಿ ಮುಖ್ಯಮಂತ್ರಿಯ ಹೆಸರಿಲ್ಲ. ಹೀಗಾಗಿ, ಕೊನೆಯಲ್ಲಿ ಮಂಗಳಾರತಿ ಸೇವೆ ಸ್ವೀಕರಿಸಲು ನಿಮ್ಮ ಬಳಿಗೆ ಬರಲಾಯಿತು ಎಂದು ಅರ್ಚಕರು ಹೇಳಿದರು.
ಅರ್ಚಕರ ಈ ಮಾತು ಕೇಳಿದ ಹನುಮಂತಯ್ಯ ಅವರಿಗೆ ನಗು ತಡೆಯಲಾಗಲಿಲ್ಲ. ಅರ್ಚಕರ ಕಾನೂನು ಪಾಲನೆಗೆ ಮೆಚ್ಚುಗೆ ಸೂಚಿಸಿದರು ಎಂದ ಮಲೆಯೂರು ಗುರುಸ್ವಾಮಿ, `ಈ ಮಣ್ಣಿನಲ್ಲಿ ಕಾನೂನನ್ನೂ ಗೌರವಿಸುವ ಗುಣವಿದೆ~ ಎಂಬ ಮಾತು ಹೇಳಲು ಮರೆಯಲಿಲ್ಲ.