ಆಲೂರು: ಮಕ್ಕಳನ್ನು ಸರಿದಾರಿಗೆ ತರುವುದು ಪೋಷಕರು ಮತ್ತು ಸಮಾಜದ ಕರ್ತವ್ಯ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರಾಧಕುಮಾರ್ ಹೇಳಿದರು.
ತಾಲ್ಲೂಕಿನ ಹಂಪನಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿದ ಅವರು, ವಿದ್ಯಾರ್ಥಿಗಳು ತಂದೆ -ತಾಯಿ ಮತ್ತು ಗುರು ಹಿರಿಯರಿಗೆ ವಿಧೇಯರಾಗಿ, ಕಷ್ಟಪಟ್ಟು ಓದುವ ಮೂಲಕ ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನೇ ದಿನೇ ಇಳಿ ಮುಖವಾಗುತಿದ್ದು, ಮುಚ್ಚುವ ಸ್ಥಿತಿ ತಲುಪಿರುವುದು ನೋವಿನ ಸಂಗತಿ. ಇದನ್ನು ತಪ್ಪಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಶಾಂತಪ್ಪ, ತಾಲ್ಲೂಕು ಕಸಾಪ ನಿರ್ದೇಶಕ ಕೆ.ಕೆ.ಸಿದ್ದೇಗೌಡ, ತಾಲ್ಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಮೂರ್ತಿ ಮಾತನಾಡಿದರು.
ಕದಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಕೆ.ಜಗದೀಶ್, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರುಗಳಾದ ಶಾಂತಪ್ಪ, ಹಾಸನ ಅಮೃತ ವಿದ್ಯಾ ಸಂಸ್ಥೆ ಡಾ.ಚಂದ್ರಶೇಖರ್, ಬಯಲಹಳ್ಳಿ ದೈಹಿಕ ಶಿಕ್ಷಕ ಸಿ.ಕೆ.ಅನಂತ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕ ಕೆ.ಎಸ್.ಸುಂದರಮ್ ನಿರೂಪಿಸಿದರು. ಶಿಕ್ಷಕ ರಾಮಚಂದ್ರ ಸ್ವಾಗತಿಸಿದರು. ಶಿಕ್ಷಕಿ ದೇವಿರಮ್ಮ ವಂದಿಸಿದರು.