ನವದೆಹಲಿ (ಪಿಟಿಐ): ಕೋಮು ಗಲಭೆಗೆ ತುತ್ತಾದ ಉತ್ತರ ಪ್ರದೇಶದ ಮುಜಫ್ಫರ್ನಗರ ಜಿಲ್ಲೆಯಲ್ಲಿ ಆರಂಭಿಸಲಾದ ಪರಿಹಾರ ಶಿಬಿರದಲ್ಲಿ 40 ಮಕ್ಕಳು ಸಾವಿಗೀಡಾಗಿರುವ ವಿಷಯದ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಮಿತಿ ಮೀರಿದ ಚಳಿಯಿಂದ ರಕ್ಷಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆದೇಶಿಸಿದೆ.
ಪರಿಹಾರ ಕೇಂದ್ರಗಳಲ್ಲಿ ದಾಖಲಾದವರ ಆರೋಗ್ಯದ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ತಾನು ಆದೇಶ ನೀಡಿದ ನಂತರವೂ ಸಾವಿನ ಪ್ರಕರಣ ವರದಿಯಾಗುತ್ತಿದ್ದು, ಈ ಬಗ್ಗೆ ಮಾಧ್ಯಮ ವರದಿಗಳು ಗಮನಸೆಳೆದಿವೆ. ಹಾಗಾಗಿ ಈ ಕುರಿತು ರಾಜ್ಯದ ಆಡಳಿತ ಸರಿಯಾದ ಮಾಹಿತಿ ನೀಡಬೇಕು ಎಂದು ಕೋರ್ಟ್ ಸೂಚಿಸಿದೆ.
‘ಮಕ್ಕಳ ಸಾವಿನ ಪ್ರಕರಣ ಹೆಚ್ಚುತ್ತಿರುವ ಕುರಿತು ಸಂಸತ್ತಿನಲ್ಲೂ ತೀವ್ರ ಚರ್ಚೆಯಾಗುತ್ತಿದ್ದು, ಮಾಧ್ಯಮ ವರದಿಗಳನ್ನು ನಾವು ಓದಿದ್ದೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಹಾಗೂ ನ್ಯಾಯಮೂರ್ತಿಗಳಾದ ರಂಜನಾ ಪ್ರಕಾಶ್ ದೇಸಾಯಿ ಹಾಗೂ ರಂಜನ್ ಗೊಗೋಯಿ ಅವರನ್ನು ಒಳಗೊಂಡ ಪೀಠ ಕಳವಳವ್ಯಕ್ತಪಡಿಸಿದೆ.